
ಬೆಂಗಳೂರು: ಸುಸ್ತು ಅಂತ ಆಸ್ಪತ್ರೆಗೆ ಸೇರಿದ ಮಹಿಳೆ ದಾರುಣವಾಗಿ ಸಾವನ್ನಪ್ಪಿರೋ ಘಟನೆ ಕಲ್ಯಾಣ್ ನಗರದಲ್ಲಿ ನಡೆದಿದೆ. ಕಲ್ಪನಾ ಮೃತ ಮಹಿಳೆ. ಮಹಿಳೆ ದೇಹದಲ್ಲಿ ಪ್ಲೇಟ್ಲೆಟ್ಸ್ ಕಡಿಮೆ ಇದೆ ಅಂತಾ ಆಸ್ಪತ್ರೆಯವರು ತಕ್ಷಣ ಚಿಕಿತ್ಸೆ ಪ್ರಾರಂಭ ಮಾಡಿದ್ದಾರೆ. ಈ ವೇಳೆ ರೋಗಿಗೆ ಐರನ್ ಇಂಜೆಕ್ಷನ್ ನೀಡಲಾಗಿದೆ. ಅದನ್ನ ತಡೆದುಕೊಳ್ಳಲಾಗದೆ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈ ವಿಷಯ ತಿಳಿದ ಕೂಡಲೇ ಬೆಳಗಾಗುತ್ತಿದ್ದಂತೆ ಎಲ್ಲಿ ಇದು ನಮ್ಮ ತಲೆ ಮೇಲೆ ಬರುತ್ತೆ ಎಂದು ದುಡ್ಡು ತೆಗೆದುಕೊಳ್ಳದೆ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನ ಮನೆಯತ್ತ ಕಳುಹಿಸಿದ್ದಾರೆ. ಕಲ್ಪನಾಳ ಮೃತ ದೇಹವನ್ನ ಮನೆಗೆ ಕರೆದುಕೊಂಡು ಬಂದಾಗ ಸಾವಿನ ನಿಜಾಂಶ ಬಯಲಾಗಿದೆ. ಆಸ್ಪತ್ರೆಯವರ ಅವೈಜ್ಞಾನಿಕ ಚಿಕಿತ್ಸೆಯಿಂದ ಮಹಿಳೆ ಕಲ್ಪನಾ ಜೀವ ಹೋಗಿರುವುದು ಪತ್ತೆಯಾಗಿದೆ. ಆಸ್ಪತ್ರೆಯ ಟ್ರೈನಿಗಳು ನನ್ನ ಹೆಂಡ್ತಿಗೆ ಚಿಕಿತ್ಸೆ ಕೊಟ್ಟು ಸಾಯಿಸಿ ಬಿಟ್ರು ಎಂದ ಕಲ್ಪನಾ ಪತಿ ಗಂಭೀರ ಆರೋಪ ಮಾಡಿದ್ದಾರೆ.



ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗೆ ಆದರೆ ನಾವು ಯಾರನ್ನ ನಂಬೋದು ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಬಾಣಸವಾಡಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೂಡಲೇ ಕುಟುಂಬಸ್ಥರು ಪೊಲೀಸರ ಸಮ್ಮುಖದಲ್ಲಿ ಮೃತದೇಹವನ್ನ ಮತ್ತೆ ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ.