

ಮಂಡ್ಯ: ಕೇರಳದ ವಯನಾಡಿನ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಅಜ್ಜಿ ಮತ್ತು ಮೊಮ್ಮಗನ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯರಾತ್ರಿ ನೆರವೇರಿಸಲಾಯಿತು.
ಸೋಮವಾರ ಮಧ್ಯರಾತ್ರಿ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಕೆ.ಆರ್.ಪೇಟೆಯ ಕತ್ತರಘಟ್ಟ ಮೂಲದ ಒಂದೇ ಕುಟುಂಬದ ಅನಿಲ್, ಝಾನ್ಸಿ, ನಿಹಾಲ್, ದೇವರಾಜು, ಲೀಲಾವತಿ ಕಾಣೆಯಾಗಿದ್ದರು. ಬಳಿಕ ಅನಿಲ್, ಝಾನ್ಸಿ, ದೇವರಾಜು ಗಾಯಾಳುಗಳ ಸ್ಥಿತಿಯಲ್ಲಿ ಸಿಕ್ಕರು. ಆದರೆ ನಿಹಾಲ್ ಮತ್ತು ಲೀಲಾವತಿ ಅವರ ಸುಳಿವು ದೊರೆತಿರಲಿಲ್ಲ.ಗುರುವಾರ ಮಧ್ಯಾಹ್ನ ಲೀಲಾವತಿ ಹಾಗೂ ನಿಹಾಲ್ ಶವಗಳು ಮಣ್ಣಿನ ಅಡಿಯಲ್ಲಿ ಪತ್ತೆಯಾದವು. ನಂತರ ವಯನಾಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಗುರುವಾರ ಮಧ್ಯರಾತ್ರಿ ಇವರ ಶವಗಳನ್ನು ಕತ್ತರಿಘಟ್ಟ ಗ್ರಾಮಕ್ಕೆ ತರಲಾಯಿತು.
ಮೃತದೇಹಗಳು ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರು, ನೆಂಟರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಅವರ ಜಮೀನಿನಲ್ಲಿ ಅಜ್ಜಿ, ಮೊಮ್ಮಗನನ್ನು ಒಂದೇ ಚಿತೆಯಲ್ಲಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು.







