Visitors have accessed this post 124 times.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ವಿದ್ಯಾರಣ್ಯ ನಗರ ಬಡಾವಣೆಯಲ್ಲಿ ತಕ್ಷಣ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಹಾಗೂ ಅದರ ಸಮರ್ಪಕ ನಿರ್ವಹಣೆ ಮಾಡುವಂತೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು ಆಗ್ರಹ.

Visitors have accessed this post 124 times.

ತುಳುನಾಡ ರಕ್ಷಣಾ ವೇದಿಕೆ (ರಿ) ಉಳ್ಳಾಲ ತಾಲೂಕು ಘಟಕದ ನೇತೃತ್ವದಲ್ಲಿ, ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘ (ರಿ) ನ ಸಹಯೋಗದೊಂದಿಗೆ ದಿನಾಂಕ 19-09-2024 ರಂದು ಗುರುವಾರ ಬೆಳಿಗ್ಗೆ 11.00 ಗಂಟೆಗೆ ಉಳ್ಳಾಲ ನಗರಸಭಾ ವ್ಯಾಪ್ತಿಯ ವಿದ್ಯಾರಣ್ಯ ನಗರ ಬಡಾವಣೆಯ ಪಾರ್ಕ್ ಪ್ರದೇಶದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಶ್ರೀ ಯೋಗೀಶ್ ಶೆಟ್ಟಿ ಜಪ್ಪು ರವರು ಮಾತನಾಡುತ್ತಾ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳಿದ್ದು, ಇಲ್ಲಿ ಜನರು ಶಾಂತಿ ಸೌಹಾರ್ದತೆಯಿಂದ ಅನೋನ್ಯವಾಗಿ ವಾಸಿಸುತ್ತಿದ್ದಾರೆ. ಈ ಪ್ರದೇಶವು ಶೈಕ್ಷಣಿಕವಾಗಿ ಬೆಳೆಯುತ್ತಿದ್ದು ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪಕ್ಕದಲ್ಲಿ ಕಡಲುತೀರ ಇರುವುದರಿಂದ ಇಲ್ಲಿ ಫಿಶ್‌ ಮಿಲ್‌ಗಳು ಕಾರ್ಯಾಚರಿಸುತ್ತಿದ್ದು ಮೀನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ವಿದ್ಯಾರಣ್ಯ ನಗರ ತುಂಬಾ ಹಳೆಯ ಬಡಾವಣೆಯಾಗಿದ್ದು ಇಲ್ಲಿ 40 ರಿಂದ 50 ಮನೆಗಳಿದ್ದು ಸಮಾಜದ ಗಣ್ಯ, ಪ್ರತಿಷ್ಠಿತ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ಬೇಸರದ ವಿಷಯವೇನೆಂದರೆ ಈ ಬಡಾವಣೆಯಲ್ಲಿ ನಿವಾಸಿಗಳು ಮೂಲ ಸೌಕರ್ಯಗಳಾದ ರಸ್ತೆ, ನೀರು ಹಾಗೂ ಸ್ವಚ್ಛತೆಯ ಕೊರತೆ ಎದುರಿಸುತ್ತಿದ್ದಾರೆ. ರಸ್ತೆಗಳು ಹದಗೆಟ್ಟಿದ್ದು ಅದರಲ್ಲೂ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬುವುದರಿಂದ ವಾಹನಗಳು ಹಾಗೂ ನಿವಾಸಿಗಳಿಗೆ ಸಂಚರಿಸಲು ಕಷ್ಟವಾಗುತ್ತಿದೆ. ಬಡಾವಣೆಯಲ್ಲಿ ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ತುಂಬಿ ರಸ್ತೆ ಹಾಳಾಗುವುದಲ್ಲದೆ ಮನೆಗಳ ಕಂಪೌಂಡ್ ಒಳಗೆ ನೀರು ನುಗ್ಗುತ್ತಿದೆ. ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದರಿಂದ ಪರಿಸರ ಮಲೀನವಾಗಿ ಮಲೇರಿಯ, ಡೆಂಗ್ಯೂನಂತಹ ಮಾರಾಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗಿದೆ. ಈ ಕಾರಣದಿಂದಾಗಿ ಇಲ್ಲಿನ ಹಿರಿಯ ನಾಗರೀಕರು, ಮಹಿಳೆಯರು, ಮಕ್ಕಳು ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘ (ರಿ) ಸದಸ್ಯರಾಗಿರುವ ಇಲ್ಲಿನ ನಿವಾಸಿಗಳು ಪ್ರತಿ ವರ್ಷ ಆಸ್ತಿ, ನೀರು ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಉಳ್ಳಾಲ ನಗರಸಭೆಗೆ ತೆರಿಗೆ ಕಟ್ಟುತ್ತಿದ್ದು, ಹಲವು ವರ್ಷಗಳಿಂದ ತಾವು ಅನುಭವಿಸುವ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಸ್ಥಳೀಯ ಕೌನ್ಸಿಲರ್, ಶಾಸಕರು ಮತ್ತು ಉಳ್ಳಾಲ ನಗರ ಸಭೆಯ ಅಧಿಕಾರಿಗಳಿಗೆ ನಿವಾಸಿಗಳು ಮನವಿ ಸಲ್ಲಿಸಿದರೂ ನಗರ ಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಈ ನಡುವೆ ಉಳ್ಳಾಲ ನಗರಸಭೆ ವತಿಯಿಂದ ವಿದ್ಯಾರಣ್ಯ ನಗರದ ಪ್ರಮುಖ ಮತ್ತು ಅಡ್ಡರಸ್ತೆಯ ಕಾಂಕ್ರೀಟಿಕರಣದ ಕಾಮಗಾರಿಗೆ ಹಣ ಮಂಜೂರಾಗಿ ಈ ಸಂಬಂಧ ದಿನಾಂಕ 08-03-2018 ರಂದು ಕ್ಷೇತ್ರದ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ವರ್ಷಗಳು ಕಳೆದರೂ ಈವರೆಗೂ ಕಾಮಗಾರಿ ಆರಂಭವಾಗಿಲ್ಲ. ಉಳ್ಳಾಲ ನಗರಸಭೆಯು ವಿದ್ಯಾರಣ್ಯ ನಗರ ರಸ್ತೆ ಕಾಂಕ್ರೀಟಿಕರಣಕ್ಕೆ ಮಂಜೂರಾದ ಹಣವನ್ನು ಬೇರೆ ವಾರ್ಡಿನ ರಸ್ತೆ ಅಭಿವೃದ್ಧಿಗೆ ವರ್ಗಾಯಿಸಿರುವುದು ವಿದ್ಯಾರಣ್ಯನಗರ ನಿವಾಸಿಗಳ ಗಮನಕ್ಕೆ ಬಂದಿದ್ದು, ಇದು ವಿಷಾದನೀಯವಾಗಿರುತ್ತದೆ. ನಮ್ಮ ಬಡಾವಣೆಯಲ್ಲಿ 1) ಮುಖ್ಯ ಹಾಗೂ ಅಡ್ಡರಸ್ತೆಗಳ ಕಾಂಕ್ರೀಟಿಕರಣ

2) ಮಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಒಳಚರಂಡಿ ನಿರ್ಮಾಣ

3) ಬಡಾವಣೆಯಲ್ಲಿ ಬೆಳೆದಿರುವ ಪೊದೆ, ಹುಲ್ಲುಗಳ ಕೀಳುವಿಕೆ ಹಾಗೂ ಸಮರ್ಪಕ ಕಸ ವಿಲೇವಾರಿ ಮಾಡಿ ಪರಿಸರದ ನೈರ್ಮಲ್ಯ ಕಾಪಾಡುವುದು.

4) ಬಡಾವಣೆಯಲ್ಲಿ ಫಾಗಿಂಗ್ ಕಾರ್ಯ ಕೈಗೊಳ್ಳುವುದರ ಮೂಲಕ ಮಲೇರಿಯಾ, ಡೆಂಗ್ಯೂ ಬರದಂತೆ ಕ್ರಮ ಕೈಗೊಳ್ಳುವುದು.

5) ಉದ್ಯಾನವನ ಅಭಿವೃದ್ಧಿ ಹಾಗೂ ನಿರ್ವಹಣೆ ಹಾಗೂ ಬಡಾವಣೆಯಲ್ಲಿ ಮೀಸಲಿಟ್ಟ ಕಾಮನ್ ಏರಿಯಾ ಪ್ರದೇಶವನ್ನು ನಿವಾಸಿಗಳ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ.

6) ರಸ್ತೆಗಳಿಗೆ ವಿದ್ಯುತ್ ದೀಪ ಅಳವಡಿಕೆ ಹಾಗೂ ಅದರ ಸಮರ್ಪಕ ನಿರ್ವಹಣೆ

ಈ ಮೇಲೆ ತಿಳಿಸಿದ ಮೂಲಭೂತ ಸೌಕರ್ಯಗಳನ್ನು ಉಳ್ಳಾಲ ನಗರಸಭೆ ಹಾಗೂ ಸಂಬಂಧಪಟ್ಟ ಜನ ಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಂಡು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ವಿದ್ಯಾರಣ್ಯ ನಗರ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಇಂದು ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ತಕ್ಷಣ ಉಳ್ಳಾಲ ನಗರಸಭೆಯು ಮೂಲಭೂತ ಸೌಕರ್ಯ ಕಲ್ಪಿಸಲು ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘ (ರಿ) ನಿವಾಸಿಗಳ ಸಹಯೋಗದೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು. ಕಾರ್ಯಕ್ರಮ ನಿರೂಪಣೆ ಕೇಂದ್ರಿಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಗೈದರು , ಈ ಸಂದರ್ಭದಲ್ಲಿ ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ ಸದಾಶಿವ ಪೋಳ್ಳಯ , ಪ್ರಧಾನ ಕಾರ್ಯದರ್ಶಿ ಟೀಚರ್ ಜಾನಕಿ ಪುತ್ರನ್ , ಟಿ ಉಮೇಶ್ ಕಾಮತ್ , ವಕೀಲರಾದ ಕೆ. ಎಸ್. ನಾರಾಯಣ, ಸ್ಥಳೀಯ ಸಮಸ್ಯೆಗಳ ಗಮನ ಸೆಳೆದರು. ಹಾಗೂ ಬೇಡಿಕೆ ಈಡೇರದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗತಿಯಲ್ಲಿ ನಡೆಸಲಾಗುವುದು ಎಂದರು. ಡಾ .ಸುಧೀರ್, ಯೋಗೀಶ್ ಬೆಳ್ಚಾಡ, ಕೇಶವ ಪುತ್ರನ್ ವೆಂಕಟಗಿರಿ ಸುಹಲ್ ಶೋಭಾ ಮುರಳಿ ಸುಹೈಜ್ , ಸುಮನ ಕಾಮತ್, ಸುಮಿತ , ಉಳ್ಳಾಲ ತಾಲೂಕು ಗೌರವಾಧ್ಯಕ್ಷದ
ಡಾ. ಶೇಕ್ ಭಾವ , ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಸುಕೇಶ್ ಜಿಕೆ ಉಚ್ಚಿಲ್ , ಉಳ್ಳಾಲ ತಾಲೂಕು ಸಂಘಟನಾ ಕಾರ್ಯದರ್ಶಿ ಯಶು ಪಕ್ಕಳ ತಲಪಾಡಿ, ಅಜೀಜ್ ಉಳ್ಳಾಲ್ , ರೆಹಮತುಲ್ಲಾ , ಬಾಲಚಂದ್ರ ,ಕೇಂದ್ರೀಯ ಮಂಡಳಿ ಜೊತೆ ಕಾರ್ಯದರ್ಶಿ ಜ್ಯೋತಿ ಜೈನ್  ಮತ್ತಿತರ ತುಳುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ವಿದ್ಯಾರಣ್ಯ ನಗರದ ನಿವಾಸಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ನಗರಸಭೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಭಾವನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು

Leave a Reply

Your email address will not be published. Required fields are marked *