ಬಂಟ್ವಾಳ: ಕಾರು ಮತ್ತು ರಿಕ್ಷಾ ನಡುವೆ ಭೀ*ಕರ ಅ*ಪಘಾತವಾಗಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾ*ವನ್ನಪ್ಪಿ, ಮಕ್ಕಳ ಸಹಿತ 8 ಮಂದಿಗೆ ಗಾ*ಯಗಳಾಗಿರುವ ಘಟನೆ ಬಂಟ್ವಾಳದ ವಗ್ಗ ಸಮೀಪ ಬಾಂಬಿಲದಲ್ಲಿ ಇಂದು (ಡಿ.5) ಸಂಭವಿಸಿದೆ.
ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ಹರೀಶ್ ಎಂಬುವವರ ಪತ್ನಿ ತಿಲಕ (40) ಮೃತ ಮಹಿಳೆ.
ಮಕ್ಕಳ ಸಹಿತ ರಿಕ್ಷಾದಲ್ಲಿದ್ದ ಎಂಟು ಮಂದಿಗೆ ಗಾಯವಾಗಿದ್ದು, ಅವರನ್ನು ಯಶಸ್ವಿನಿ, ಗೀತಾ, ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್, ದಿಶಾನಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ವದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭ ದುರ್ಘಟನೆ ನಡೆದಿದೆ. ಪಂಜಿಕಲ್ಲುವಿನಿಂದ ನಾರಾಯಣ ಪೂಜಾರಿಯ ರಿಕ್ಷಾವನ್ನು ಗಾಯಾಳುಗಳು ಬಾಡಿಗೆ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಅದೇ ಗಾಡಿಯಲ್ಲಿ ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ವೇಳೆ ರಿಟ್ಸ್ ಕಾರು ಮತ್ತು ಆಪೆ ರಿಕ್ಷಾ ನಡುವೆ ಅಪಘಾತವಾಗಿದೆ.
ಇನ್ನು ಘಟನೆ ತಿಳಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ ಉಳಿಪ್ಪಾಡಿಗುತ್ತು ಗಾಯಾಳುಗಳು ದಾಖಲಾಗಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ತಿಲಕ ಅವರ ಮೃತದೇಹ ಇರಿಸಲಾದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಘಟನೆಯ ಕುರಿತು ಪಾಣೆಮಂಗಳೂರು ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.