May 6, 2026
WhatsApp Image 2025-02-01 at 9.24.49 AM

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಸರಣಿ ದರೋಡೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಕಲಿ ಇಡಿ ದಾಳಿ ಆಯಿತು, ಕೋಟೆಕಾರ್ ಬ್ಯಾಂಕ್ ದರೋಡೆ ಆಯಿತು, ಇದೀಗ ಈ ಬೆನ್ನಲ್ಲೇ ಪುತ್ತೂರಲ್ಲಿ ಉದ್ಯಮಿಯೊಬ್ಬರನ್ನು ಅಪಹರಿಸಿ ಬರೋಬ್ಬರಿ 29 ಲಕ್ಷ ದೋಚಿದ ಅಘಾತಕಾರಿ ಪ್ರಕರಣ ಬಯಲಾಗಿದೆ.

ನೆಲಮಂಗಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ರಾನ್ಸ್‌ಪೊರ್ಟ್‌ ಮಾಲಕ ಇಕ್ಬಾಲ್‌ (35) ಎಂಬುವವರನ್ನು ನಗರದ ಕುಣಿಗಲ್‌ ಬೈಪಾಸ್‌ ಸಮೀಪದಲ್ಲಿ ಅಡ್ಡಗಟ್ಟಿದ ಗರುಡ ಗ್ಯಾಂಗ್‌ ಅಪಹರಣ ಮಾಡಿ 29 ಲಕ್ಷ ರೂ.ಗಳಿಗೂ ಹೆಚ್ಚು ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ. ಇಕ್ಬಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಣಾಲು ನಿವಾಸಿಯಾಗಿದ್ದು ಅಶೋಕ್‌ ಪೆಟ್ರೋಲಿಯಂ ಸಂಸ್ಥೆಯನ್ನು ಸ್ಥಾಪಿಸಿ ಟ್ರಾನ್ಸ್‌ಪೊರ್ಟ್‌ ನಡೆಸುತ್ತಿದ್ದಾರೆ. ಜ. 24ರಂದು ಬೆಂಗಳೂರಿಗೆ ಬಂದಿದ್ದ ಇಕ್ಬಾಲ್‌ ತನ್ನ ವ್ಯವಹಾರ ಮುಗಿಸಿಕೊಂಡು ಹಣ ಸಂಗ್ರಹಿಸಿ ಸ್ನೇಹಿತನ ಮನೆಗೆ ಭೇಟಿ ನೀಡಿ ಊರಿಗೆ ಹಿಂತಿರುಗಲು ನೆಲಮಂಗಲ ಮಾರ್ಗವಾಗಿ ಕಾರಿನಲ್ಲಿ ತೆರಳಿದ್ದರು. ರಾತ್ರಿ ಹೊಟೇಲ್‌ನಲ್ಲಿ ಊಟ ಮುಗಿಸಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮುಂದೆ ಕಾರಿನಲ್ಲಿ ಚಲಿಸುತ್ತಿದ್ದಾಗ ಕೆಎ 02 ಎಂಎನ್‌ 8122ನಂಬರಿನ ಟಯೋಟಾ ಇನೋವಾ ಕಾರಿನಲ್ಲಿ ಬಂದ ಕೆಲವರು ಕಾರು ಅಡ್ಡಗಟ್ಟಿ ಅಟ್ಯಾಕ್‌ ಮಾಡಿ ಗರುಡ ಗ್ಯಾಂಗ್‌ ಎಂದು ಚಿತ್ರಹಿಂಸೆ ನೀಡಿ ವಿವಿಧ ಖಾತೆಗಳಿಗೆ 15 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡು ಕಾರಿನಲ್ಲಿದ್ದ 1.23 ಲಕ್ಷ ಹಣ ಪಡೆದು ಸಂಕಲೇಶಪುರದ ಕಡೆ ಅಪಹರಣ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೆ 2 ದಿನದ ಅನಂತರ ಸಕಲೇಶಪುರದ ದೋಣಿಗಲ್‌ ರೆಸಾರ್ಟ್‌ಗೆ ಹೋಗಿ ಅಲ್ಲಿ ಇಕ್ಬಾಲ್‌ ಅಣ್ಣನಿಂದ 13 ಲಕ್ಷ ನಗದು ಹಣವನ್ನು ಪಡೆದು ಇಕ್ಬಾಲ್‌ನನ್ನು ಬಿಟ್ಟು ಆತನ ಮೊಬೈಲ್‌ ಕಾರನ್ನು ತೆಗೆದುಕೊಂಡು ದೂರು ನೀಡಿದರೆ ನಿನ್ನ ಹತ್ಯೆಮಾಡಿಬಿಡುತ್ತೇವೆಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಹೆದರಿದ ಇಕ್ಬಾಲ್‌ ತಡವಾಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಗರುಡ ಗ್ಯಾಂಗ್‌ ದೊಡ್ಡ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

About The Author

Leave a Reply