ಮಂಗಳೂರು: ಉದ್ಯಮಿ ಮನೆ ದರೋಡೆ ಪ್ರಕರಣ – ಕೇರಳದ ಪೊಲೀಸ್ ಸೇರಿದಂತೆ ಮತ್ತೆ ನಾಲ್ವರು ಅರೆಸ್ಟ್

ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಾರ್ಶದಲ್ಲಿ ಉದ್ಯಮಿಯೊಬ್ಬರ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ರೂಪಾಯಿ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಎಎಸ್ಐ ಸೇರಿದಂತೆ ಮತ್ತೆ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಕೇರಳದ ಕೊಡಂಗಲ್ಲೂರು ಪೊಲೀಸ್ ಠಾಣೆಯ ಎಎಸ್ಐ ಶಫೀರ್‌ ಬಾಬು (48), ಬಂಟ್ವಾಳ ಪರ್ಲಿಯಾ ನಿವಾಸಿ ಮೊಹಮ್ಮದ್‌ ಇಕ್ಬಾಲ್‌(38), ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್‌ ಅನ್ಸಾರ್‌ (27), ಬಂಟ್ವಾಳ ನಾರ್ಶ ನಿವಾಸಿ ಸಿರಾಜುದ್ದೀನ್‌ (37) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ತನಿಖಾ ತಂಡವು ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್‌ ಫರ್ನಾಂಡಿಸ್‌(49), ಸಚಿನ್‌ ಟಿ.ಎಸ್‌.(29) ಹಾಗೂ ಶಬಿನ್‌ ಎಸ್‌.(27) ಎಂಬವರನ್ನು ಬಂಧಿಸಿದ್ದು, ಅವರುಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ತನಿಖೆ ಮುಂದುವರಿದು ಫೆ.15ರಂದು ಕೃತ್ಯ ಎಸಗಲು ಮನೆಯ ಮಾಹಿತಿ ನೀಡಿದ್ದ ಸ್ಥಳಿಯ ಆರೋಪಿ ಕೊಳ್ನಾಡು ಬಂಟ್ವಾಳ ನಿವಾಸಿ ಸಿರಾಜುದ್ದೀನ್‌ (37) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆಗ ಆತ ನೀಡಿದ ಮಾಹಿತಿಯನ್ವಯ ಬಂಟ್ವಾಳ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್‌ ಅನ್ಸಾರ್‌ (27) ಎಂಬವರನ್ನು ದಸ್ತಗಿರಿ ಮಾಡಲಾಗಿತ್ತು.

ಅಲ್ಲದೆ ದರೋಡೆ ಕೃತ್ಯಕ್ಕೆ ಮೂಲ ಸೂತ್ರದಾರನಾದ ಕೇರಳದ ಶಫೀರ್‌ ಬಾಬು(48) ಎಂಬಾತನನ್ನು ಬಂಧಿಸಿದ್ದಾರೆ‌. ಈತನು ಕೇರಳ ರಾಜ್ಯದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಪೊಲೀಸ್‌ ಠಾಣೆ ಸಹಾಯಕ ಪೊಲೀಸ್‌ ಉಪ ನಿರೀಕ್ಷಕನಾಗಿದ್ದಾನೆ. ಸದ್ರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್, ಐಪಿಎಸ್‌ರವರ ಮಾರ್ಗದರ್ಶನದಲ್ಲಿ, ಜಿಲ್ಲಾ ವ್ಯಾಪ್ತಿಯ ಠಾಣೆಗಳಿಂದ ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿರುತ್ತದೆ.

Leave a Reply