
ಹೊಸಪೇಟೆ : ಪ್ರಾಣ ಪಣಕಿಟ್ಟು ಕೇವಲ ಆದಾಯಕ್ಕಾಗಿ ದುಡುಯುವವರು ಅನೇಕರಿದ್ದಾರೆ. ಅದರಲ್ಲಿ ಲೈನ್ ಮ್ಯಾನ್ಗಳು ಸಹ ಒಬ್ಬರು. ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುವ ವೇಳೆ ಸ್ವಲ್ಪ ಆಚೆ ಈಚೆ ಆದರೂ ಅವರ ಪ್ರಾಣಕ್ಕೆ ಹಾನಿ ಕಟ್ಟಿಟ್ಟ ಬುತ್ತಿ. ಇದೀಗ ಅಂತೆಯೇ ಲೈನ್ ಮ್ಯಾನ್ ಒಬ್ಬನ ದುರಂತ ಅಂತ್ಯ ಸಂಭವಿಸಿದ್ದು, ವಿದ್ಯುತ್ ಲೈನ್ ಬದಲಾವಣೆ ವೇಳೆ ವಿದ್ಯುತ್ ಪ್ರವಹಿಸಿ ಸಾವನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ನಡೆದಿದೆ.



ಅಜ್ಜಯ್ಯ(28) ಮೃತ ಲೈನ್ಮ್ಯಾನ್. ಲೈನ್ ಬದಲಾವಣೆ ಮಾಡುವಾಗ ಹಿರಿಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೇ, ಲೈನ್ ಬದಲಾವಣೆ ಮಾಡಲು ಸೂಚನೆ ನೀಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಆರೋಪ ಕೇಳಿ ಬಂದಿದೆ. ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಅವಘಡದಲ್ಲಿ ಲೈನ್ಮ್ಯಾನ್ ಅಜ್ಜಯ್ಯ ಸಾವನಪ್ಪಿದ ಸುದ್ದಿ ತಿಳಿಯುತ್ತಿಂದತೇ ಸ್ಥಳದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೇಲಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಆಗ್ರಹಿಸಿ, ವಿದ್ಯುತ್ ಕಂಬದಿಂದ ಮೃತದೇಹ ಕೆಳಗಿಳಿಸಲು ಒಪ್ಪದೇ ಪಟ್ಟು ಹಿಡಿದು ಕುಳಿತರು. ಈ ಘಟನೆ ವೇಳೆ ಪೊಲೀಸರ ಜತೆಗೆ ಜನರು ಮಾಕ್ ಸಮರ ನಡೆದ ಕಾರಣ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ದೂಪದಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.