
ಮಂಗಳೂರು: ನಗರದ ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಕೇಸ್ ಸದ್ಯ ಕರ್ನಾಟಕದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಮತ್ತೊಂದೆಡೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಿನ್ನೆ ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ‘ಫಿನೀಶ್’ ಎಂಬ ಪೋಸ್ಟ್ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಹೀಗಿರುವಾಗಲೇ ಇದೀಗ ಪ್ರತೀಕಾರದ ಪೋಸ್ಟ್ಗಳ ವಿರುದ್ಧ ಮಂಗಳೂರು ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.



ಸುಹಾಸ್ ಹತ್ಯೆಗೂ ಮುನ್ನ ಮತ್ತು ಹತ್ಯೆ ಬಳಿಕ ರಿವೇಂಜ್ ಪೋಸ್ಟ್ಗಳು ಎಲ್ಲೆಡೆ ಹರಿದಾಡಿದ್ದವು. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದ ಪ್ರತೀಕಾರದ ಪೋಸ್ಟ್ಗಳ ವಿರುದ್ದ ಕೊನೆಗೂ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಇದೀಗ ಸಮರ ಸಾರಿದ್ದಾರೆ.
ಹಲವು ಇನ್ಸ್ಟಾಗ್ರಾಂ ಪೇಜ್ಗಳು, ಫೇಸ್ ಬುಕ್ಗಳಲ್ಲಿ ಪ್ರತೀಕಾರದ ಪೋಸ್ಟ್, ವಾಟ್ಸಾಪ್ ಸಂದೇಶ ಹಿನ್ನೆಲೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮುಲ್ಕಿ, ಉರ್ವಾ, ಬರ್ಕೆ, ಮೂಡಬಿದಿರೆ, ಕಾವೂರು ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ.
‘ಸುಹಾಸ್ ಶೆಟ್ಟಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲ ತೋರಿಸದಿದ್ದರೆ ನಾವೇ ಇರುವುದಿಲ್ಲ ಎಂದು hindu_mantra_’ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲೂ ಪೋಸ್ಟ್ ಹಾಕಲಾಗಿದೆ. ‘ನಮಗೆ ಯಾವುದೇ ಉತ್ತರ ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು. ಜೀವಕ್ಕೆ, ಜೀವನೇ ಬೇಕು ಎಂಬುದಾಗಿ ಸ್ಟೋರಿ ಹಾಕಲಾಗಿದೆ.
ullaltho_makka ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ‘ಪ್ರತಿರೋಧ ಅಪರಾಧವಲ್ಲ’ ಎಂದು ಪೋಸ್ಟ್ ಮಾಡಲಾಗಿದೆ. ಜೊತೆಗೆ ಹತ್ಯೆ ಸಮರ್ಥನೆ ಹಾಗೂ ಪ್ರತೀಕಾರದ ಪೋಸ್ಟ್ಗಳನ್ನು ಹಾಕಲಾಗಿದೆ. ಬಳಿಕ ಪೊಲೀಸ್ ವೈಫಲ್ಯದ ಆರೋಪ ಬೆನ್ನಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ಇದೀಗ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಶಂಕಿತ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಮಂಗಳೂರಿನಲ್ಲೇ ಅವಿತ್ತಿದ್ದರು ಎಂಬುವುದು ತಿಳಿದುಬಂದಿದೆ.