ಸುಹಾಸ್ ಹತ್ಯೆ: ಫಿನೀಶ್, ರಿವೇಂಜ್ ಪೋಸ್ಟ್​​ಗಳ ವಿರುದ್ಧ ಮಂಗಳೂರು ಪೊಲೀಸ್ ಕಾರ್ಯಾಚರಣೆ

ಮಂಗಳೂರು: ನಗರದ ಹಿಂದೂ ಕಾರ್ಯಕರ್ತ, ರೌಡಿಶೀಟರ್‌ ಸುಹಾಸ್‌ ಶೆಟ್ಟಿ ಕೊಲೆ ಕೇಸ್​​ ಸದ್ಯ ಕರ್ನಾಟಕದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಮತ್ತೊಂದೆಡೆ ಪೊಲೀಸರು  ತನಿಖೆ ಚುರುಕುಗೊಳಿಸಿದ್ದಾರೆ. ನಿನ್ನೆ ಸುಹಾಸ್ ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ ಸೋಶಿಯಲ್​ ಮೀಡಿಯಾದಲ್ಲಿ ‘ಫಿನೀಶ್’ ಎಂಬ ಪೋಸ್ಟ್ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಹೀಗಿರುವಾಗಲೇ ಇದೀಗ ಪ್ರತೀಕಾರದ ಪೋಸ್ಟ್​ಗಳ ವಿರುದ್ಧ ಮಂಗಳೂರು ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸುಹಾಸ್ ಹತ್ಯೆಗೂ ಮುನ್ನ ಮತ್ತು ಹತ್ಯೆ ಬಳಿಕ ರಿವೇಂಜ್ ಪೋಸ್ಟ್​ಗಳು ಎಲ್ಲೆಡೆ ಹರಿದಾಡಿದ್ದವು. ಹೀಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆಗಿದ್ದ ಪ್ರತೀಕಾರದ ಪೋಸ್ಟ್​​ಗಳ ವಿರುದ್ದ ಕೊನೆಗೂ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು ಇದೀಗ ಸಮರ ಸಾರಿದ್ದಾರೆ.

ಹಲವು ಇನ್​​ಸ್ಟಾಗ್ರಾಂ ಪೇಜ್​ಗಳು, ಫೇಸ್ ಬುಕ್​​​ಗಳಲ್ಲಿ ಪ್ರತೀಕಾರದ ​ಪೋಸ್ಟ್​​, ವಾಟ್ಸಾಪ್​ ಸಂದೇಶ ಹಿನ್ನೆಲೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮುಲ್ಕಿ, ಉರ್ವಾ, ಬರ್ಕೆ, ಮೂಡಬಿದಿರೆ, ಕಾವೂರು ಠಾಣೆಗಳಲ್ಲಿ ಎಫ್​ಐಆರ್​ ದಾಖಲಾಗಿದೆ.

‘ಸುಹಾಸ್ ಶೆಟ್ಟಿ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲ ತೋರಿಸದಿದ್ದರೆ ನಾವೇ ಇರುವುದಿಲ್ಲ ಎಂದು hindu_mantra_’ಎಂಬ ಇನ್​ಸ್ಟಾಗ್ರಾಂ ಪೇಜ್​ನಲ್ಲೂ ಪೋಸ್ಟ್​ ಹಾಕಲಾಗಿದೆ. ‘ನಮಗೆ ಯಾವುದೇ ಉತ್ತರ ಬೇಡ ರಕ್ತಕ್ಕೆ ರಕ್ತವೇ ಉತ್ತರವಾಗಬೇಕು. ಜೀವಕ್ಕೆ, ಜೀವನೇ ಬೇಕು ಎಂಬುದಾಗಿ ಸ್ಟೋರಿ ಹಾಕಲಾಗಿದೆ.

ullaltho_makka ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ‘ಪ್ರತಿರೋಧ ಅಪರಾಧವಲ್ಲ’ ಎಂದು ಪೋಸ್ಟ್ ಮಾಡಲಾಗಿದೆ. ಜೊತೆಗೆ ಹತ್ಯೆ ಸಮರ್ಥನೆ ಹಾಗೂ ಪ್ರತೀಕಾರದ ಪೋಸ್ಟ್​ಗಳನ್ನು ಹಾಕಲಾಗಿದೆ. ಬಳಿಕ ಪೊಲೀಸ್ ವೈಫಲ್ಯದ ಆರೋಪ ಬೆನ್ನಲ್ಲೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ಇದೀಗ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಶಂಕಿತ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಮಂಗಳೂರಿನಲ್ಲೇ ಅವಿತ್ತಿದ್ದರು ಎಂಬುವುದು ತಿಳಿದುಬಂದಿದೆ.

Leave a Reply