

ತಿರುಪತಿ: ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್ಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ರೋಗಿ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಿರುಪತಿ ಜಿಲ್ಲೆಯ ಉರಂದೂರು ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಪಶ್ಚಿಮ ಬಂಗಾಳದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಮಹೀಂದ್ರಾ ಬೊಲೆರೊ ಆಂಬ್ಯುಲೆನ್ಸ್, ಶ್ರೀಕಾಳಹಸ್ತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನ ಜಾವ 3:45ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ರಸ್ತೆಯ ಎಡಭಾಗದಲ್ಲಿ ನಿಂತಿದ್ದ ಟ್ರಕ್ ಅನ್ನು ಗಮನಿಸದ ಚಾಲಕ, ಅತಿ ವೇಗವಾಗಿ ಹೋಗಿ ಅದರ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ನಿದ್ರೆ ಹಾಗೂ ಆಯಾಸವೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಿವಾಸಿಗಳಾದ ಬೋಜೋನ್ ಡೊಲೊಯಿ (ರೋಗಿ), ಅವರ ಪತ್ನಿ ತಗೋರಿ ಡೊಲೊಯಿ, ಸಹೋದರ ಜತಿನ್ ಡೊಲೊಯಿ ಮತ್ತು ಎರಡನೇ ಚಾಲಕ ಜಿತೇಶ್ ಪಂಡಿತ್ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಂಬಂಧಿ ಗೀತಾ ಚಕ್ರವರ್ತಿ ಮತ್ತು ಚಾಲಕ ರಾಕೇಶ್ ಪಂಡಿತ್ ಅವರನ್ನು ಶ್ರೀಕಾಳಹಸ್ತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಕ್ರೇನ್ ಬಳಸಿ ಆಂಬ್ಯುಲೆನ್ಸ್ ಅನ್ನು ತೆರವುಗೊಳಿಸಿ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.






