May 13, 2026
image - 2026-05-13T152132.888

ಚೆನ್ನೈ: ಮೈತ್ರಿ ಪಕ್ಷಗಳು, ಪ್ರತಿಪಕ್ಷಗಳು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಆಗಿ ನೇಮಕ ಮಾಡಿಕೊಂಡ ಆದೇಶವನ್ನು ಸಿಎಂ ವಿಜಯ್ ಹಿಂಪಡೆದುಕೊಂಡಿದ್ದಾರೆ.

ಮೇ 12ರಂದು ವಿಜಯ್ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ನೇಮಕ ಮಾಡಿದ್ದರು. ಅದಾದ ಬಳಿಕ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಂದು ಆದೇಶವನ್ನು ರದ್ದುಗೊಳಿಸಿದ್ದಾರೆ.ವಿಶ್ವಾಸ ಮತ ಯಾಚನೆ ನಂತರ ಈ ನೇಮಕಾತಿಯನ್ನು ಮರುಪರಿಶೀಲಿಸುವುದಾಗಿ ಸಿಎಂ ವಿಜಯ್ ತಿಳಿಸಿದ್ದರು. ರಾಜ್ಯ ರಾಜಕೀಯದಲ್ಲಿ ಅನಿಶ್ಚಿತತೆ ಉಂಟಾದ ಬಳಿಕ ಸರ್ಕಾರ ರಚಿಸಲು ತಮಿಳಗ ವೆಟ್ರಿ ಕಳಗಂ (ಟಿವಿಕೆಗೆ) ಹೊರಗಿನಿಂದ ಬೆಂಬಲ ನೀಡಿದ್ದ ಪಕ್ಷಗಳಲ್ಲೂ ಈ ನಿರ್ಧಾರ ಅಸಮಾಧಾನ ಮೂಡಿಸಿತ್ತು. ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದ ವಿಸಿಕೆ ಪಕ್ಷದ ಶಾಸಕ ವನ್ನಿ ಅರಸು ವಿಧಾನಸಭೆಯಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದರು.ನಮ್ಮ ಸರ್ಕಾರ ಜ್ಯೋತಿಷ್ಯಕ್ಕಿಂತ ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಬೇಕು ಎಂದು ಅವರು ವಿಶ್ವಾಸಮತ ಯಾಚನೆಗೂ ಮುನ್ನ ಹೇಳಿದ್ದರು. ಸರ್ಕಾರಿ ವ್ಯವಸ್ಥೆಯಲ್ಲಿ ಜ್ಯೋತಿಷಿಗೆ ಔಪಚಾರಿಕ ಸಲಹಾ ಹುದ್ದೆಯನ್ನ ಏಕೆ ನೀಡಲಾಗಿದೆ ಎಂದು ತಮಿಳಗ ವೆಟ್ರಿ ಕಳಗಂ ಬೆಂಬಲಿತ ಕೆಲ ಪಕ್ಷದ ನಾಯಕರು ಪ್ರಶ್ನೆ ಮಾಡಿದ್ದರು. ಅಲ್ಲದೇ ಡಿಎಂಡಿಕೆ ಪಕ್ಷ , ಬಿಜೆಪಿ ಈ ನೇಮಕಾತಿ ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದರು.ಜ್ಯೋತಿಷಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಟಿವಿಕೆ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಗೆಲುವು ಸಾಧಿಸಿದೆ.ವಿಜಯ್ ಮಾತ್ರವಲ್ಲದೇ, ಜಯಲಲಿತಾ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ಇದೇ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರ ಬಳಿ ಭವಿಷ್ಯ ಕೇಳಿದ್ದರು ಎನ್ನಲಾಗಿದೆ.

About The Author

Leave a Reply