

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗ ಅಂತ ಹೆಗ್ಗಳಿಕೆ ಇರುವ ಮಂಗಳೂರಿನ ಪಲ್ನೀರ್ ಪ್ರದೇಶದಲ್ಲಿ ಈಗ ಜನರು “ಮೂಗಿಗೆ ಟವಲ್ ಹಾಕಿ” ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಡ್ಯಾನೀಸ್ ಹೋಟೆಲ್ ಬಳಿ ಕಳೆದ 10 ದಿನಗಳಿಂದ ತೆರೆದಿರುವ ಡ್ರೈನೇಜ್ನಿಂದ ಬರುವ ಕೆಟ್ಟ ವಾಸನೆ ಮತ್ತು ಕೊಳಚೆ ನೀರು ಇಡೀ ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಮುಖಂಡ ರಿಯಾಝ್ ಹರೇಕಳ ಅವರು ಈ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. “ಡ್ಯಾನೀಸ್ ಹೋಟೆಲ್ನಿಂದ ಶುರುವಾಗಿ ಇಂದಿರಾ ಹಾಸ್ಪಿಟಲ್, ವಿನಿಟಿ ಹಾಸ್ಪಿಟಲ್, ಐಲ್ಯಾಂಡ್ ಹಾಸ್ಪಿಟಲ್ವರೆಗಿನ ಇಡೀ ಮಾರ್ಗದಲ್ಲಿ ಡ್ರೈನೇಜ್ ನೀರು ಹರಿದು, ದುರ್ವಾಸನೆ ಬೀರುತ್ತಿದೆ. ಮಂಗಳೂರು ಮಹಾನಗರ ಪಾಲಿಕೆಯ ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ತಲೆಕೆಡಿಸಿಕೊಂಡಿಲ್ಲ. ಸ್ಥಳೀಯ ಕಾರ್ಪೊರೇಟರ್ಗೂ ಈ ಬಗ್ಗೆ ಕಾಳಜಿ ಇಲ್ಲ” ಅಂತ ರಿಯಾಝ್ ಆರೋಪಿಸಿದ್ದಾರೆ.


“ಕಾರ್ಮಿಕರು ನಮ್ಮ ಮಾತು ಕೇಳುವುದಿಲ್ಲ” – ಪಾಲಿಕೆ ಇಂಜಿನಿಯರ್
ಸಮಸ್ಯೆಯ ಬಗ್ಗೆ ಮಹಾನಗರ ಪಾಲಿಕೆಯ ಇಂಜಿನಿಯರ್ಗೆ ದೂರು ನೀಡಿದಾಗ, “ಪಾಲಿಕೆಯ ಕಾರ್ಮಿಕರು ನಾವು ಹೇಳಿದ ಹಾಗೆ ಕೇಳುವುದಿಲ್ಲ” ಅಂತ ಉತ್ತರ ಬಂದಿದೆ ಅಂತ ರಿಯಾಝ್ ಹೇಳುತ್ತಾರೆ. “ಸಾರ್ವಜನಿಕರ ಕಷ್ಟವನ್ನು ಯಾರಲ್ಲಿ ಹೇಳಬೇಕು ಅನ್ನೋ ಪ್ರಶ್ನೆ ಈಗ ಜನರ ಬಾಯಲ್ಲಿ ಇದೆ. ಚುನಾವಣೆ ಬಂದಾಗ ಮಾತ್ರ ಕಾಣುವ ಕಾರ್ಪೊರೇಟರ್ಗಳು ಈಗ ಎಲ್ಲಿ?” ಅಂತ ಅವರು ಪ್ರಶ್ನಿಸುತ್ತಾರೆ.

ಪ್ರತಿಭಟನೆಯ ಎಚ್ಚರಿಕೆ
ಕೂಡಲೇ ಡ್ರೈನೇಜ್ ಕೊಳಚೆ ನೀರಿನ ಸಮಸ್ಯೆಯನ್ನು ಸರಿಪಡಿಸದಿದ್ದರೆ, ಡ್ರೈನೇಜ್ ಮುಂದೆ ನಿಂತೇ ಪ್ರತಿಭಟನೆ ಮಾಡಬೇಕಾಗುತ್ತದೆ ಅಂತ ರಿಯಾಝ್ ಹರೇಕಳ ಎಚ್ಚರಿಕೆ ನೀಡಿದ್ದಾರೆ. ಈ ಮನವಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ವೇದವ್ಯಾಸ ಕಾಮತ್ ಅವರಿಗೆ ತಲುಪಿಸುವಂತೆ ಅವರು ಪತ್ರಿಕೆಯ ಮೂಲಕ ವಿನಂತಿಸಿದ್ದಾರೆ.
“ಹಾರ್ಟ್ ಆಫ್ ಸಿಟಿ ಅಂತ ಕರೆಯಿಸಿಕೊಳ್ಳುವ ಪಲ್ನೀರ್ನಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ” ಅಂತ ರಿಯಾಝ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಈ ಸಮಸ್ಯೆಗೆ ಎಷ್ಟು ಬೇಗ ಸ್ಪಂದಿಸುತ್ತದೆ, ಪಲ್ನೀರ್ ಜನರಿಗೆ ನೆಮ್ಮದಿಯ ನಿಟ್ಟುಸಿರು ಸಿಗುತ್ತದೆಯೇ ಅನ್ನೋದು ಈಗಿನ ಪ್ರಶ್ನೆ
.






