

ರಿಯಾದ್/ಕೋಝಿಕ್ಕೋಡ್: ಸೌದಿ ಅರೇಬಿಯಾದಲ್ಲಿ 20 ವರ್ಷಗಳ ಸುದೀರ್ಘ ಜೈಲುವಾಸ ಅನುಭವಿಸಿದ ಕೇರಳದ ಅಬ್ದುಲ್ ರಹೀಂ ಸೋಮವಾರ ಬಿಡುಗಡೆಯಾಗಿದ್ದಾರೆ. ಸೌದಿ ಅಧಿಕಾರಿಗಳು ಬಿಡುಗಡೆ ಆದೇಶಕ್ಕೆ ಸಹಿ ಹಾಕಿದ್ದು, ತಾಯಿಯ ಕಣ್ಣೀರಿನ ಪ್ರಾರ್ಥನೆಗೆ ಅಲ್ಲಾಹು ಕೊನೆಗೂ ಉತ್ತರ ನೀಡಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಹರ್ಷ ವ್ಯಕ್ತಪಡಿಸಿದ್ದಾರೆ.
ಜನರ ಪ್ರಾರ್ಥನೆಗೆ ಸಿಕ್ಕ ಜಯ
2006ರಲ್ಲಿ ಉದ್ಯೋಗ ಅರಸಿ ಸೌದಿಗೆ ಹೋದ ಕೋಝಿಕ್ಕೋಡ್ ಜಿಲ್ಲೆಯ ಕೊಡಂಪುಳ ನಿವಾಸಿ ಅಬ್ದುಲ್ ರಹೀಂ, ತನ್ನ ಪ್ರಾಯೋಜಕನ ವಿಕಲಚೇತನ ಮಗನ ಮರಣ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದರು. 2024ರಲ್ಲಿ ಮೃತ ಬಾಲಕನ ಕುಟುಂಬ ₹34 ಕೋಟಿ ಬ್ಲಡ್ ಮನಿ ಪಡೆದು ಕ್ಷಮಿಸಲು ಒಪ್ಪಿದ ನಂತರ ಮರಣದಂಡನೆ ರದ್ದಾಯಿತು. 20 ವರ್ಷಗಳ ಜೈಲು ಶಿಕ್ಷೆ ಮೇ 20, 2026ಕ್ಕೆ ಮುಕ್ತಾಯಗೊಂಡು ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ.

ಚೆಮ್ಮನೂರ್ ಜ್ಯುವೆಲರ್ಸ್ ಎಂಡಿ ಬೋಬಿ ಅವರಿಗೆ ಅಭಿನಂದನೆ
ಈ ಬೃಹತ್ ಕ್ರೌಡ್ಫಂಡಿಂಗ್ ಅಭಿಯಾನಕ್ಕೆ ಪ್ರಮುಖ ಸಹಾಯ ಮತ್ತು ನೇತೃತ್ವ ನೀಡಿದ ಚೆಮ್ಮನೂರ್ ಜ್ಯುವೆಲರ್ಸ್ ಎಂಡಿ ಬೋಬಿ ಚೆಮ್ಮನೂರ್ ( ಬೋಬಿ ) ಅವರಿಗೆ ರಿಯಾಝ್ ಹರೇಕಳ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಕೇರಳ ಮತ್ತು ಕರ್ನಾಟಕದ ಅನಿವಾಸಿಗಳು, ಪ್ರವಾಸಿಗರು, ಸಾಮಾನ್ಯ ಕಾರ್ಮಿಕರಿಂದ ಹಿಡಿದು ಉದ್ಯಮಿಗಳವರೆಗೆ ಎಲ್ಲರೂ ಕೈಜೋಡಿಸಿ ₹34 ಕೋಟಿ ಸಂಗ್ರಹಿಸಿದರು. ಇದು ಮಾನವೀಯತೆಯ ಐತಿಹಾಸಿಕ ಗೆಲುವು.
ರಿಯಾಝ್ ಹರೇಕಳ ಪ್ರತಿಕ್ರಿಯೆ:
“ಅಬ್ದುಲ್ ರಹೀಂ ಬಿಡುಗಡೆ ಕೇವಲ ಒಬ್ಬ ವ್ಯಕ್ತಿಯ ಬಿಡುಗಡೆಯಲ್ಲ, ಇದು ಜನಗಣದ ಪ್ರಾರ್ಥನೆಯ ಶಕ್ತಿ. ಬೋಬಿ ಚೆಮ್ಮನೂರ್ ಅವರ ನೇತೃತ್ವ, ಕೇರಳ-ಕರ್ನಾಟಕದ ಸಹೋದರರು ಮಾಡಿದ ಸಹಾಯವನ್ನು ಅಲ್ಲಾಹು ಸ್ವೀಕರಿಸಲಿ. ರಹೀಂ ಅವರ ತಾಯಿ ಫಾತಿಮಾ 20 ವರ್ಷಗಳಿಂದ ಸುರಿಸಿದ ಕಣ್ಣೀರಿಗೆ ಇಂದು ಪ್ರತಿಫಲ ಸಿಕ್ಕಿದೆ. ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಅಲ್ಲಾಹನು ಇದರ ಪ್ರತಿಫಲ ನೀಡಲಿ, ಯಾ ಅಲ್ಲಾಹ್. ತಾಯಿಯ ಕಣ್ಣೀರಿನ ಪ್ರತಿಫಲವಾದ ಈ ಬಿಡುಗಡೆಗೆ ಕಾರಣರಾದ ಎಲ್ಲರಿಗೂ, ರಹೀಂ ರವರ ತಾಯಿಗೂ ನಾವೆಲ್ಲರೂ ದುವಾ ಮಾಡೋಣ” ಎಂದು ರಿಯಾಝ್ ಹರೇಕಳ ಮನವಿ ಮಾಡಿದ್ದಾರೆ.
ತಾಯಿಯ ಕಾಯುವಿಕೆ ಅಂತ್ಯ
ಸಾಯುವ ಮುನ್ನ ಮಗನನ್ನು ಒಮ್ಮೆ ನೋಡಬೇಕು” ಎಂಬುದೊಂದೇ ಆಸೆಯಿಂದ ಕಾಯುತ್ತಿದ್ದ ತಾಯಿ ಫಾತಿಮಾ ಅವರಿಗೆ ಇಂದು ಈದ್ನ ಸಂಭ್ರಮ. ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ರಹೀಂ ಶೀಘ್ರದಲ್ಲೇ ಕೇರಳಕ್ಕೆ ಮರಳಲಿದ್ದಾರೆ.
ಅಲ್ಲಾಹು ಸಹಾಯ ಮಾಡಿದ ಎಲ್ಲರಿಗೂ ಉತ್ತಮ ಪ್ರತಿಫಲ ನೀಡಲಿ, ಆಮೀನ್.
ವರದಿ
ರಿಯಾಝ್ ಹರೇಕಳ






