

ಮಂಗಳೂರು: ಬೆಂಗಳೂರು ಮತ್ತು ಮಂಗಳೂರು ನಡುವೆ ಅತಿ ಶೀಘ್ರದಲ್ಲೇ ಸಂಚರಿಸಲಿದೆ ಎನ್ನಲಾಗಿದ್ದ ಪ್ರೀಮಿಯಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸೇವೆ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದೆ.ಜೂನ್ 3ರ ಬುಧವಾರದಂದು ನಿಗದಿಯಾಗಿದ್ದ ರೈಲಿನ ಮೊದಲ ಅಧಿಕೃತ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ ವಲಯವು ಕೊನೆ ಘಳಿಗೆಯಲ್ಲಿ ರದ್ದುಗೊಳಿಸಿದ್ದು, ಕರಾವಳಿ ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ನಿನ್ನೆ ಅಂದರೆ ಜೂ.1ಕ್ಕೆ ಈ ಪ್ರಯೋಗ ನಡೆಯಬೇಕಿತ್ತು. ಆದರೆ ಇದನ್ನು ಜೂ.3ಕ್ಕೆ ಅಂದರೆ ನಾಳೆಗೆ ಮುಂದೂಡಲಾಗಿತ್ತು. ಆದರೆ ಇದೀಗ ಅದನ್ನು ರದ್ದು ಮಾಡಲಾಗಿದೆ.ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥಾಪಕರ ಕಚೇರಿಯು ಮೇ 31 ರಂದು ಅಧಿಕೃತ ಆದೇಶ ಹೊರಡಿಸಿದ್ದು, ಪ್ರಾಯೋಗಿಕ ಸಂಚಾರದ ಪ್ರಸ್ತಾವನೆಯನ್ನು ಹಿಂಪಡೆದಿದೆ. ಆದೇಶ ಸಂಖ್ಯೆ T.454/YPR-MAQ Vande Bharat/2026-27(241) ರ ಪ್ರಕಾರ, ಜೂನ್ 3 ರಂದು ಯಶವಂತಪುರ (YPR) ಮತ್ತು ಮಂಗಳೂರು (MAQ) ನಡುವೆ ನಡೆಯಬೇಕಿದ್ದ ವಂದೇ ಭಾರತ್ ಪ್ರಾಯೋಗಿಕ ಸಂಚಾರವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ, ರೈಲ್ವೆ ನಿಲ್ದಾಣಗಳಲ್ಲಿ ಮಾಡಲಾಗಿದ್ದ ಎಲ್ಲಾ ಕಾರ್ಯಾಚರಣೆಯ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ.ಬೆಂಗಳೂರು-ಮಂಗಳೂರು ನಡುವಿನ ಕಠಿಣವಾದ ಶಿರಾಡಿ ಘಾಟ್ ಸೆಕ್ಷನ್ನ ಸುರಂಗ ಮಾರ್ಗಗಳು ಮತ್ತು ತಿರುವುಗಳಲ್ಲಿ 8 ಬೋಗಿಗಳ ಈ ಸೆಮಿ-ಹೈಸ್ಪೀಡ್ ರೈಲಿನ ವೇಗ, ಹಳಿಗಳ ಸಾಮರ್ಥ್ಯ ಹಾಗೂ ತಾಂತ್ರಿಕ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಈ ಟ್ರಯಲ್ ರನ್ ಅತ್ಯಂತ ಪ್ರಮುಖವಾಗಿತ್ತು. ರೈಲ್ವೆ ಪ್ರೇಮಿಗಳು ಮತ್ತು ಸಾರ್ವಜನಿಕರು ಈ ಐಷಾರಾಮಿ ರೈಲಿನ ಆಗಮನವನ್ನು ಕಣ್ಣಿಟ್ಟು ಕಾಯುತ್ತಿದ್ದರು. ಆದರೆ ಇದೀಗ ಅವರ ಕಾಯುವಿಕೆಗೆ ತಣ್ಣೀರೆರಚಿದೆ.ರದ್ದತಿಗೆ ಕಾರಣವೇನು?ಪ್ರಾಯೋಗಿಕ ಸಂಚಾರ ರದ್ದತಿಗೆ ರೈಲ್ವೆ ಇಲಾಖೆಯು ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ ವಂದೇ ಭಾರತ್ ರೈಲಿನ ಪ್ರತ್ಯೇಕ ರೇಕ್ (Rake/ಬೋಗಿಗಳ ಸೆಟ್) ಲಭ್ಯವಿಲ್ಲದಿರುವುದು, ಕಾರ್ಯಾಚರಣೆಯ ಆದ್ಯತೆಗಳು ಮತ್ತು ಕೆಲವು ತಾಂತ್ರಿಕ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಪ್ರಸ್ತುತ ಶಿರಾಡಿ ಘಾಟ್ ಮಾರ್ಗದಲ್ಲಿ ಸರಕು ಸಾಗಣೆ ರೈಲುಗಳ ಸಂಚಾರ ಎಂದಿನಂತೆ ಮುಂದುವರಿದಿರುವುದರಿಂದ, ಮೂಲಸೌಕರ್ಯದ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ ಎಂಬುದು ಸ್ಪಷ್ಟವಾಗಿದೆ.
ಮುಂದಿನ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ:

ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ, ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಬೂಸ್ಟ್ ನೀಡುವ ಈ ವಂದೇ ಭಾರತ್ ಯೋಜನೆಯ ಮುಂದಿನ ಟ್ರಯಲ್ ರನ್ ದಿನಾಂಕವನ್ನು ರೈಲ್ವೆ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಕರಾವಳಿ ಭಾಗದ ಪ್ರಯಾಣಿಕರು ಮುಂದಿನ ಅಧಿಕೃತ ಅಪ್ಡೇಟ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ.






