June 5, 2026
ASM_people_04062026_1

ಬೆಳ್ತಂಗಡಿ: ಪ್ರಸಿದ್ಧ ಪ್ರವಾಸಿ ತಾಣವಾದ ಗಡಾಯಿಕಲ್ಲು (ನರಸಿಂಹಗಡ) ಕೋಟೆಯ ಕಡಿದಾದ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಯುವಕನೊಬ್ಬನ ಕಾಲು ಟ್ವಿಸ್ಟ್ ಆಗಿ, ಆತ ಕೆಳಗೆ ಇಳಿಯಲಾರದೆ ಸಿಲುಕಿಕೊಂಡಿದ್ದ ಘಟನೆ ಜೂನ್ 4 ರಂದು ನಡೆದಿದೆ. ಬಳಿಕ ರಕ್ಷಣಾ ಸಿಬ್ಬಂದಿ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಯುವಕನನ್ನು ಸುರಕ್ಷಿತವಾಗಿ ಕೆಳಗೆ ಕರೆತಂದಿದ್ದಾರೆ.ತಣ್ಣಿರುಪಂಥ ಗ್ರಾಮದ ಜನತಾ ಕಾಲೋನಿ ನಿವಾಸಿ ಮೊಹಮ್ಮದ್ ಶರೀಫ್ (30) ರಕ್ಷಿಸಲ್ಪಟ್ಟ ಯುವಕ. ಈತ ಇಬ್ಬರು ಮಹಿಳೆಯರು ಸೇರಿದಂತೆ ಇತರ ಮೂವರೊಂದಿಗೆ ಗಡಾಯಿಕಲ್ಲು ಪ್ರವಾಸಕ್ಕೆ ತೆರಳಿದ್ದ ಎನ್ನಲಾಗಿದೆ.ಕಡಿದಾದ ಬಂಡೆಯ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಶರೀಫ್ ಅವರ ಕಾಲು ಟ್ವಿಸ್ಟ್ ಆಗಿದ್ದು, ತೀವ್ರ ನೋವಿನಿಂದಾಗಿ ಅವರಿಗೆ ಕೆಳಗೆ ಇಳಿಯಲು ಸಾಧ್ಯವಾಗಿಲ್ಲ. ಬೆಟ್ಟದ ಮಧ್ಯಭಾಗದಲ್ಲೇ ಸಿಲುಕಿಕೊಂಡಾಗ, ಅವರ ಜೊತೆಯಲ್ಲಿದ್ದವರು ತಕ್ಷಣ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ನೆರವು ಕೋರಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಜಂಟಿಯಾಗಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.ನಿರಂತರ ಮಳೆಯಿಂದಾಗಿ ಕಡಿದಾದ ಬಂಡೆಯ ಮೆಟ್ಟಿಲುಗಳು ಬಹಳ ಜಾರುತ್ತಿದ್ದವು. ಈ ಪರಿಸ್ಥಿತಿಯಲ್ಲಿ ಗಾಯಾಳುವನ್ನು ಸ್ಟ್ರೆಚರ್‌ನಲ್ಲಿ ಹೊತ್ತು ತರುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿತ್ತು. ಆದರೂ ಧೃತಿಗೆಡದ ತಂಡಗಳು, ಸುಮಾರು 3 ಗಂಟೆಗಳ ಕಾಲ ಸತತ ಶ್ರಮ ವಹಿಸಿ, 1.5 ಕಿ.ಮೀ ದೂರದ 1,500 ಮೆಟ್ಟಿಲುಗಳನ್ನು ಇಳಿದು ಯುವಕನನ್ನು ಸುರಕ್ಷಿತವಾಗಿ ಕೆಳಗೆ ಕರೆತಂದಿದ್ದಾರೆ.ಬಳಿಕ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

About The Author

Leave a Reply