June 20, 2026
dredger

ಸುರತ್ಕಲ್: ಸುರತ್ಕಲ್‌ನ ಗುಡ್ಡೆಕೊಪ್ಲ ಕಡಲತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ಬಂದು ನಿಂತಿದ್ದ “ಭಗವತಿ ಪ್ರೇಮ್” ಎಂಬ ಬೃಹತ್ ಗಾತ್ರದ ಡ್ರೆಡ್ಜರ್ ಹಡಗನ್ನು ಕತ್ತರಿಸಿ ಒಡೆಯುವ ಕಾರ್ಯ ಭರದಿಂದ ಸಾಗಿದ್ದು, ಇಷ್ಟು ದಿನ ಪ್ರವಾಸಿಗರ ಗಮನ ಸೆಳೆಯುತ್ತಿದ್ದ ಕರಾವಳಿಯ ಪ್ರಸಿದ್ಧ ಸೆಲ್ಫಿ ಪಾಯಿಂಟ್ ಇನ್ಮುಂದೆ ಮಾಯವಾಗಲಿದೆ.ಕೆಲವು ವರ್ಷಗಳ ಹಿಂದೆ ಮಳೆಗಾಲದ ಭೀಕರ ಗಾಳಿ-ಮಳೆಗೆ ಸಿಲುಕಿ ಎನ್‌ಎಂಪಿಟಿ (NMPT) ಬಂದರಿನಲ್ಲಿ ಲಂಗರು ಹಾಕಿದ್ದ ಈ ಡ್ರೆಡ್ಜರ್ ಹಡಗು, ಆ್ಯಂಕರ್ ಕಿತ್ತುಕೊಂಡು ಬಂದು ಸುರತ್ಕಲ್‌ನ ಗುಡ್ಡೆಕೊಪ್ಲ ತೀರದಲ್ಲಿ ಹೂತುಕೊಂಡಿತ್ತು. ತಾಂತ್ರಿಕ ಕಾರಣಗಳಿಂದಾಗಿ ಇದನ್ನು ಮತ್ತೆ ಸಮುದ್ರಕ್ಕೆ ಎಳೆಯಲು ಸಾಧ್ಯವಾಗಿರಲಿಲ್ಲ. ಅನಿರೀಕ್ಷಿತವಾಗಿ ಕಡಲತೀರ ಸೇರಿದ ಈ ಬೃಹತ್ ಹಡಗು ಕಾಲಕ್ರಮೇಣ ಸ್ಥಳೀಯರು ಹಾಗೂ ಪ್ರವಾಸಿಗರ ಪಾಲಿಗೆ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಟ್ಟಿತ್ತುಕಡಲ ತಡಿಯಲ್ಲಿ ಸಿಲುಕಿದ್ದ ಈ ದೈತ್ಯ ಹಡಗನ್ನು ವೀಕ್ಷಿಸಲು ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಕುಟುಂಬ ಸಮೇತ ಬಂದು ಹಡಗಿನ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ಹಿರಿಯ ನಾಗರಿಕರು ಇಲ್ಲಿ ವಾಯುವಿಹಾರ ನಡೆಸುವುದು ಸಾಮಾನ್ಯ ಎನಿಸಿತ್ತು. ಹೊರಭಾಗದಿಂದ ಬರುವ ಪ್ರವಾಸಿಗರಿಗೂ ಈ ‘ಡ್ರೆಡ್ಜರ್ ‘ ಕರಾವಳಿಯ ಒಂದು ಹೆಗ್ಗುರುತಾಗಿ ಬದಲಾಗಿತ್ತು. ಆದರೆ, ಈ ಬೃಹತ್ ಹಡಗಿನಿಂದಾಗಿ ಸ್ಥಳೀಯ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಮೀನುಗಾರರು ಮತ್ತು ಸ್ಥಳೀಯರು ನಿರಂತರವಾಗಿ ತೆರವಿಗೆ ಒತ್ತಾಯಿಸುತ್ತಿದ್ದರು. ಹಲವು ಮಳೆಗಾಲಗಳನ್ನು ಕಂಡು ಜರ್ಜರಿತವಾಗಿದ್ದ ಹಡಗಿನ ವಿರುದ್ಧ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಬಂದರು ಇಲಾಖೆಯು ಹಡಗನ್ನು ಸ್ಥಳದಲ್ಲೇ ಒಡೆದು ತೆರವುಗೊಳಿಸಲು ಗುತ್ತಿಗೆ ನೀಡಿತ್ತು.ಸದ್ಯ ಸಮುದ್ರ ಶಾಂತವಾಗಿರುವ ಸಂದರ್ಭವನ್ನು ಬಳಸಿಕೊಂಡು ನುರಿತ ಕಾರ್ಮಿಕರು ಗ್ಯಾಸ್ ಕಟರ್‌ಗಳ ಮೂಲಕ ಹಡಗನ್ನು ಹಂತ ಹಂತವಾಗಿ ಕಬ್ಬಿಣದ ತುಂಡುಗಳಾಗಿ ಕತ್ತರಿಸಿ ಬೇರ್ಪಡಿಸುತ್ತಿದ್ದಾರೆ. ನೀರಿನ ಅಡಿಯಲ್ಲಿರುವ ಭಾಗವನ್ನು ಕತ್ತರಿಸಲು ವಿಶೇಷ ತಂತ್ರಜ್ಞಾನ ಬಳಸಲಾಗುತ್ತಿದ್ದು, ಕಾಮಗಾರಿ ವೇಳೆ ಸಮುದ್ರಕ್ಕೆ ತೈಲ ಸೋರಿಕೆಯಾಗದಂತೆ ಹಾಗೂ ಪರಿಸರ ಮಾಲಿನ್ಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.

About The Author

Leave a Reply