

ಸಿನಿಮೀಯ ಮಾದರಿಯ ತ್ರಿಕೋನ ಪ್ರೇಮ ಪ್ರಕರಣವೊಂದು ದಾರುಣ ಅಂತ್ಯ ಕಂಡಿದ್ದು, ಹಳೆಯ ಪ್ರೇಮಿಯ ಬೆದರಿಕೆ ಹಾಗೂ ಕಿರುಕುಳಕ್ಕೆ ಬೇಸತ್ತು ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಯಾಗಿದ್ದ ಯುವತಿಯೊಬ್ಬಳು ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಕೌಲ್ ಬಜಾರ್ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವತಿಯು ತನ್ನ ಹೊಸ ಪ್ರೇಮಿಗೆ ಕರೆ ಮಾಡಿ ಸಂಪೂರ್ಣ ಘಟನೆಯನ್ನು ವಿವರಿಸಿದ್ದಾಳೆ. ತದನಂತರ ಲೈವ್ ವೀಡಿಯೋ ರೆಕಾರ್ಡ್ ಮಾಡಿ, ತನ್ನ ಸಾಟಿಯಿಲ್ಲದ ಸಾವಿಗೆ ಕಾರಣರಾದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ಕಣ್ಣೀರು ಹಾಕುತ್ತಾ ಕೌಲ್ ಬಜಾರ್ನ ತನ್ನ ನಿವಾಸದಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ.
ಘಟನೆಯ ವಿವರ: ಬಳ್ಳಾರಿಯ ಕೌಲ್ ಬಜಾರ್ ನಿವಾಸಿಯಾಗಿದ್ದ ಈ ಯುವತಿ ಬೆಂಗಳೂರಿನ ಖಾಸಗಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆರಂಭದಲ್ಲಿ ಆಕೆ ಕೌಲ್ ಬಜಾರ್ನ ಅಜೀಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ದಿನಕಳೆದಂತೆ ಆತನ ವರ್ತನೆಯಲ್ಲಿ ಬದಲಾವಣೆ ಕಂಡುಬಂದು ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ಆತನಿಂದ ದೂರವಾಗಿದ್ದಳು. ನಂತರ ಅಜೀಂನ ಸ್ನೇಹಿತ ಸೊಹೈಲ್ ಎಂಬಾತನ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಲು ತೀರ್ಮಾನಿಸಿದ್ದರು.

ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ:
ಯುವತಿ ತನ್ನ ಸ್ನೇಹಿತ ಸೊಹೈಲ್ನನ್ನು ಮದುವೆಯಾಗಲು ಮುಂದಾಗಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಹಳೆಯ ಪ್ರೇಮಿ ಅಜೀಂ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದ. ಹಿಂದೆ ತನ್ನೊಂದಿಗಿದ್ದಾಗ ತೆಗೆಸಿಕೊಂಡಿದ್ದ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದ. ಈ ಮಾನಸಿಕ ಕಿರುಕುಳ ತಾಳಲಾರದೆ ಯುವತಿ ಅಂತಿಮವಾಗಿ ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾಳೆ.
ಪೋಷಕರಿಂದ ದೂರು ದಾಖಲು:
ಘಟನೆಯ ಬೆನ್ನಲ್ಲೇ ಮೃತರ ಪೋಷಕರು ಕೌಲ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಪ್ರೀತಿಯ ಹೆಸರಿನಲ್ಲಿ ಇಬ್ಬರೂ ಯುವಕರು ನಮ್ಮ ಮಗಳ ತಲೆಕೆಡಿಸಿ, ಆಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇಬ್ಬರ ಕಿರುಕುಳವೇ ಮಗಳ ಸಾವಿಗೆ ಕಾರಣ,” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪೋಷಕರ ದೂರಿನ ಆಧಾರದ ಮೇಲೆ ಕೌಲ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ತನಿಖೆ ಕೈಗೆತ್ತಿಕೊಂಡಿದ್ದಾರೆ.






