

ತಿರುವನಂತಪುರಂ: ಇಸ್ಲಾಂ ಧರ್ಮವು ಐತಿಹಾಸಿಕವಾಗಿ ಮಹಿಳೆಯರ ಸ್ಥಾನಮಾನವನ್ನು ಉನ್ನತೀಕರಿಸಿದೆ. ಇಸ್ಲಾಂ ಪೂರ್ವದ ಅರೇಬಿಯಾದಲ್ಲಿದ್ದ ಹೆಣ್ಣು ಶಿಶುಹತ್ಯೆಯ ಪದ್ಧತಿಯನ್ನು ಪ್ರಸ್ತಾಪಿಸಿದ ಅವರು, ಹೆಣ್ಣು ಮಕ್ಕಳ ಹತ್ಯೆಯನ್ನು ಇಸ್ಲಾಂ ನಿಷೇಧಿಸಿದೆ. ಮಹಿಳೆಯರಿಗೆ ಆಸ್ತಿಯ ಹಕ್ಕುಗಳೇ ಇಲ್ಲದಿದ್ದ ಕಾಲದಲ್ಲಿ ಇಸ್ಲಾಂ ಅವರಿಗೆ ಆಸ್ತಿ ಹಕ್ಕುಗಳನ್ನು ನೀಡಿತು. ಮಹಿಳೆಯರು ಸಾರ್ವಜನಿಕ ರಂಗದಲ್ಲಿ ಪ್ರವೇಶಿಸುವುದರ ಮೇಲಿನ ನಿರ್ಬಂಧಗಳನ್ನು ಅವರಿಗೆ ನೀಡುವ ಗೌರವದ ಒಂದು ರೂಪವಾಗಿಯೂ ನೋಡಬೇಕು ಎಂದು ಕೇರಳದ ಗ್ರ್ಯಾಂಡ್ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರು ಹೇಳಿದ್ದಾರೆ.
ಕೊಚ್ಚಿಯಲ್ಲಿ ನಡೆದ ‘ಹುಬ್ಬುಲ್ ರಸೂಲ್’ ಕಾನ್ಫರೆನ್ಸ್ನಲ್ಲಿ ಮಾತನಾಡಿ, ಮಹಿಳೆಯರನ್ನು ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಇಡಬೇಕಾದ ಚಿನ್ನದ ಆಭರಣದಂತೆ ಅವರನ್ನು ಸಂರಕ್ಷಿಸಬೇಕೆಂದು ಹೇಳಿರುವ ಅವರು ಮಹಿಳೆಯರ ಘನತೆಯನ್ನು ರಕ್ಷಿಸಲು ಇಸ್ಲಾಮಿನಲ್ಲಿ ‘ಪರ್ದಾ’ ಸಂಸ್ಕೃತಿ ಇದೆ ಎಂದು ಹೇಳಿದರು.
‘ಆಲ್-ಇಂಡಿಯಾ ಸುನ್ನಿ ಜಮಿಯ್ಯತುಲ್ ಉಲಮಾ’ ಮತ್ತು ‘ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ’ ಸಂಘಟನೆಗಳ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು, ಉದಾಹರಣೆಯಾಗಿ, ಆಭರಣದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಚಿನ್ನದ ಸರವನ್ನು ಖರೀದಿಸುವ ಸನ್ನಿವೇಶವನ್ನು ಪ್ರಸ್ತಾಪಿಸಿದರು. ಗ್ರಾಹಕರಿಗೆ ತೋರಿಸುವ ಮೊದಲು ಆ ಸರವನ್ನು ಕಪಾಟಿನಿಂದ, ನಂತರ ಪೆಟ್ಟಿಗೆಯಿಂದ ಮತ್ತು ಅಂತಿಮವಾಗಿ ಅದರ ಹೊದಿಕೆಯಿಂದ ಎಚ್ಚರಿಕೆಯಿಂದ ಹೊರತೆಗೆಯಲಾಗುತ್ತದೆ ಎಂದರು.

ಬೀಸುವ ಕಲ್ಲುಗಳನ್ನು ಮಾರಾಟ ಮಾಡುವ ಪಕ್ಕದ ಅಂಗಡಿಯೊಂದರೊಂದಿಗೆ ಅವರು ಇದನ್ನು ಹೋಲಿಸಿದರು; ಆ ಕಲ್ಲುಗಳನ್ನು ರಸ್ತೆಬದಿಯಲ್ಲಿ ಇಟ್ಟಿದ್ದರೂ, ಜನರು ಅವುಗಳ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಅಥವಾ ಅವುಗಳ ಮೇಲೆ ಹೆಜ್ಜೆ ಇರಿಸಿದರೂ ಏನೂ ಆಗುವುದಿಲ್ಲ. ಆದರೆ, ಚಿನ್ನದ ಸರವೊಂದನ್ನು ರಸ್ತೆಬದಿಯಲ್ಲಿ ಇರಿಸಿದರೆ, ಅಲ್ಲಿ ಹಾದುಹೋಗುವ ಪ್ರತಿಯೊಬ್ಬರೂ ಅದನ್ನು ಮುಟ್ಟುವಂತಾಗುತ್ತಿತ್ತು ಮತ್ತು ಅಂತಿಮವಾಗಿ ಅದರ ಸೌಂದರ್ಯ ಹಾಗೂ ಮೌಲ್ಯ ಹಾಳಾಗುತ್ತಿತ್ತು. ಧಾರ್ಮಿಕ ವಿದ್ವಾಂಸರು, ಅದರಲ್ಲೂ ವಿಶೇಷವಾಗಿ ‘ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ’, ಕಳೆದ 100 ವರ್ಷಗಳಿಂದ ಈ ನಿಲುವನ್ನು ಬೋಧಿಸುತ್ತಾ ಬಂದಿದ್ದಾರೆ ಮತ್ತು ಇದು ದೇಶದ ಮಹಿಳೆಯರಿಗೆ ತಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿಸಿದೆ ಎಂದು ಕಾಂತಪುರಂ ಹೇಳಿದರು.
ಅಂತಹ ಹೇಳಿಕೆಗಳನ್ನು ನೀಡಲು ತಮಗಿರುವ ಅಧಿಕಾರವನ್ನು ಪ್ರಶ್ನಿಸಿದ ಸಂಘಟನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ವಿದ್ವಾಂಸರು ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿರುವುದರಿಂದ, ಆ ಧರ್ಮದ ಕುರಿತು ಮಾತನಾಡುವ ಅಧಿಕಾರ ಹಾಗೂ ಜವಾಬ್ದಾರಿ ಎರಡೂ ನನಗಿದೆ ಎಂದು ಅವರು ಹೇಳಿದರು.
‘ನಾವು ಆ ಧರ್ಮವನ್ನು ಅಧ್ಯಯನ ಮಾಡಿದ್ದೇವೆ. ಆದ್ದರಿಂದ, ಇದನ್ನು ಹೇಳುವುದು ನಮ್ಮ ಕರ್ತವ್ಯ. ನಾವು ಇದನ್ನು ಹೇಳುತ್ತೇವೆ ಮತ್ತು ಹೇಳುತ್ತಲೇ ಇರುತ್ತೇವೆ. ಯಾರೂ ಇದನ್ನು ತಡೆಯಲು ಸಾಧ್ಯವಿಲ್ಲ. ತಮ್ಮ ಸಂಘಟನೆಯು ಇತರ ಧರ್ಮಗಳ ಅನುಯಾಯಿಗಳ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮುಸ್ಲಿಂ ಧಾರ್ಮಿಕ ವಿದ್ವಾಂಸರಿಗೂ ತಮ್ಮ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಅವಕಾಶವಿರಬೇಕು. ಮುಸ್ಲಿಂ ಸಮುದಾಯದೊಂದಿಗೆ ಮಾತನಾಡುವ ಹಕ್ಕು ನಮಗಿದೆ. ನಾವು ಅದನ್ನು ಮುಂದುವರಿಸುತ್ತೇವೆ. ಇಲ್ಲಿ ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.






