Visitors have accessed this post 239 times.
ಉಡುಪಿ: ಕಸಕ್ಕೆ ಬೆಂಕಿಯಿಡಲು ಹೋಗಿದ್ದ ವೇಳೆ ಮೈಗೆ ಬೆಂಕಿ ತಗುಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಮಲ್ಪೆ ಕೊಡವೂರಿನಲ್ಲಿ ನಡೆದಿದೆ.
ಮೃತರನ್ನು ಕೊಡವೂರು ನಿವಾಸಿ ಸಾರಾ ದೇವದಾಸ (63) ಎಂದು ಗುರುತಿಸಲಾಗಿದೆ. ಇವರು ಫೆ.13ರಂದು ಮನೆಯ ವಠಾರದ ಕಸದ ರಾಶಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕಸಕ್ಕೆ ಸೀಮೆ ಎಣ್ಣೆ ಹಾಕುವಾಗ ಆಕಸ್ಮಿಕವಾಗಿ ಸೀಮೆಎಣ್ಣೆ ನೈಟಿಗೆ ತಾಗಿ ಸಾರಾ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಮನೆಯವರು ಹೊರಗೆ ಬಂದು ಬೆಂಕಿ ಆರಿಸಿ ನೋಡಿದಾಗ ಸಾರಾ ಅವರ ದೇಹ ಸಂಪೂರ್ಣ ಸುಟ್ಟು ಹೋಗಿತ್ತು. ಕೂಡಲೇ ಅವರನ್ನು ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ 11:20ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.