Visitors have accessed this post 446 times.
ಬಂಟ್ವಾಳ: ಜಿಲ್ಲೆಯಲ್ಲೇ ಗರಿಷ್ಠ ವಾಹನ ಸಂಚಾರ ಇರುವ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮತ್ತು ಸರ್ವಿಸ್ ರಸ್ತೆ ಸಹಿತ ಒಳಚರಂಡಿ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದು, ಕಳೆದ ವರ್ಷದಂತೆ ಮಳೆಗಾಲದಲ್ಲಿ ಈ ಬಾರಿಯೂ ಮತ್ತೆ ಕೆಸರುಮಯಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಲಿದೆ ಎಂಬ ಭೀತಿ ವಾಹನ ಸವಾರರಲ್ಲಿ ಮೂಡಿದೆ.
ಮಂಗಳೂರು-ಬೆಂಗಳೂರು- ಮೈಸೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಲ್ಲಡ್ಕ ಭಾಗದ ಸುಮಾರು 2 ಕಿ.ಮೀ ರಸ್ತೆ ಮುಂದಿನ ಮಳೆಗಾಲದಲ್ಲಿ ಸಂಚಾರವೇ ಸ್ತಗಿತಗೊಳ್ಳುವ ಆತಂಕ ಎದುರಿಸುತ್ತಿದೆ. ಐದಾರು ವರ್ಷಗಳಿಂದ ಷಟ್ಪಥ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಲ್ಲಡ್ಕದಲ್ಲಿ 2.16 ಕಿ.ಮೀ. ಉದ್ದದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೀಗ ಮೇಲ್ಸೇತುವೆ ಕೆಳಗೆ ದೂಳಿನ ಸಮಸ್ಯೆ ಇದ್ದು, ಬಸ್, ಲಾರಿ, ಕಾರು, ರಿಕ್ಷಾ ಓಡಾಡುವಾಗ ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಈ ನಡುವೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಒಳಚರಂಡಿ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಕಲ್ಲಡ್ಕ ಪೇಟೆಗೆ ಕೃತಕ ನೆರೆ ಭೀತಿ ಕಾಡಲಿದೆ.