Visitors have accessed this post 351 times.
ಮಂಗಳೂರು: ಕಳೆದ ಕೇರಳ ವಿಧಾನಸಭೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಧ್ಯಕ್ಷ ಕೆ.ಸುರೇಂದ್ರನ್ ಸೇರಿದಂತೆ ಎಲ್ಲಾ ಆರೋಪಿಗಳು ಕಡ್ಡಾಯವಾಗಿ ಅ.25 ರಂದು ಹಾಜರಾಗುವಂತೆ ಜಿಲ್ಲಾ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣವನ್ನು ಮಂಗಳವಾರ ಕೈಗೆತ್ತಿಕೊಂಡ ನ್ಯಾಯಾ ಲಯ ಈ ಆದೇಶ ನೀಡಿದೆ. ಈ ಹಿಂದೆ ಮೂರು ಬಾರಿ ಹಾಜರಾಗುವಂತೆ ನೋಟೀಸ್ ನೀಡಿದ್ದರೂ ಹಾಜರಾಗಿರಲಿಲ್ಲ. ಪ್ರಕರಣವನ್ನು ರದ್ದುಗೊಳಿಸುವಂತೆ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಕಾರಣದಿಂದ ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯ ಇಲ್ಲ ಎಂದು ವಾದಿಸಿದ್ದರು. ಆದರೆ ಕಾನೂನಿನಂತೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ಬಳಿಕ ಅರ್ಜಿಯ ಬಗ್ಗೆ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಪ್ರಾಸಿಕ್ಯೂಶನ್ ಅಭಿಪ್ರಾಯಪಟ್ಟಿತು. ಈ ಹಿನ್ನೆಲೆಯಲ್ಲಿ ಅ.25ರಂದು ಹಾಜರಾಗುವಂತೆ ಆದೇಶ ನೀಡಿದೆ. 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಸುರೇಂದ್ರನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರರಿಂದ ನಾಮಪತ್ರ ಹಿಂಪಡೆಯಲು ಎರಡೂವರೆ ಲಕ್ಷ ರೂ. ಹಾಗೂ ಮೊಬೈಲ್ ನೀಡಿದ್ದು ಮಾತ್ರವಲ್ಲದೆ, ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಯೊಡ್ಡಲಾಗಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದರು.ಬಳಿಕ ಪ್ರಕರಣ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಲಾ ಗಿತ್ತು. ಪ್ರಕರಣದಲ್ಲಿ ಯುವ ಮೋರ್ಚಾ ರಾಜ್ಯ ಕೋಶಾಧಿಕಾರಿ ಸುನೀಲ್ ನಾಯ್ಕ ಬಿಜೆಪಿ ಮಾಜಿ ಜಿಲ್ಲಾ ದ್ಯಕ್ಷ ಕೆ.ಬಾಲಕೃಷ್ಣ ಶೆಟ್ಟಿ ಕೆ.ಸುರೇಶ್ ನಾಯಕ್, ಮಣಿಕಂಠ ರೈ, ಲೋಕೇಶ್ ನೊಂಡಾ ಆರೋಪಿಗಳಾಗಿದ್ದಾರೆ.