Visitors have accessed this post 468 times.
ಮಂಗಳೂರು: ತಾಯಿಯನ್ನೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಟೀಲು ಬಳಿಯ ಕೊಂಡೆಲಾ ಗ್ರಾಮದ ದರ್ಗಾ ನಗರದಲ್ಲಿ 60 ವರ್ಷದ ರತ್ನ ಶೆಟ್ಟಿ ಎಂಬುವವರು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಮಗ ರವಿರಾಜ್ ಶೆಟ್ಟಿ (33) ಎಂಬಾತನನ್ನು ಬಜ್ಪೆ ಪೊಲೀಸರು ಬಂದಿಸಿದ್ದಾರೆ. ಮಹಿಳೆ ರತ್ನ ಶೆಟ್ಟಿ, ಮಗ ರವಿರಾಜ್ ಜೊತೆ ದರ್ಗಾನಗರದ ಮನೆಯಲ್ಲಿ ವಾಸವಾಗಿದ್ದರು. ರವಿರಾಜ್ ಬಾಲಕೃಷ್ಣ ಎಂಬುವವರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಅನಾರೋಗ್ಯ ಎಂದು ಕೆಲಸಕ್ಕೆ ಹೋಗದ ರವಿರಾಜ್ ಮನೆಯಲ್ಲಿಯೇ ಇದ್ದ. ನಂತರ ತಾಯಿ ಮನೆಯಲ್ಲಿದ್ದರೂ ಬೀಗ ಹಾಕಿ ಹೋಗಿದ್ದ.
ಭಾನುವಾರ ಮನೆಯ ಬಳಿ ವಾಸನೆ ಬರುತ್ತಿದ್ದುದು ಗಮನಿಸಿ ಅಕ್ಕಪಕ್ಕದವರು ಪರಿಶೀಲನೆ ನಡೆಸಿದ್ದಾರೆ. ಮನೆಯ ಕೊಠಡಿಯಲ್ಲಿ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.