February 13, 2026
WhatsApp Image 2024-02-14 at 6.03.03 PM

ಬಂಟ್ವಾಳ: ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ 42 ಸಿಮ್‌ ಕಾರ್ಡ್ ಜೊತೆ  ಸಿಕ್ಕಿಬಿದ್ದಿದ್ದ ಐವರು ಆರೋಪಿಗಳ ವಿಚಾರಣೆಯನ್ನು ಜಾರಿ ನಿರ್ದೇಶನಾಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಗೆ ವಿದೇಶಿ ಕರೆನ್ಸಿ ದಂಧೆಯ ನಂಟು ಇರುವ ಅನುಮಾನದ ಹಿನ್ನಲೆಯಲ್ಲಿ ಇಡಿ ತನಿಖೆ ಆರಂಭಿಸಿದೆ.

ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಸಿಮ್ ಖರೀದಿಸಿ ಬೆಂಗಳೂರಿಗೆ ಹೊರಟಿದ್ದವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದರು. ಫೆ.1 ರಂದು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್‌ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳಿಗೆ ವಿದೇಶಿ ಕರೆನ್ಸಿ ದಂಧೆಯ ನಂಟು ಇರುವುದು ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಇಡಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿ ಪತ್ರ ಬರೆದಿದ್ದರು. ಇದೀಗ ಇಡಿ ಅಧಿಕಾರಿಗಳು ಬಂಟ್ವಾಳದ ಡಿವೈಎಸ್‌ಪಿ ಕಚೇರಿಗೆ ಆರೋಪಿಗಳನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಕೂಡಾ ಈ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡು ಪ್ರತ್ಯೇಕ ತನಿಖೆ ಆರಂಭಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.

ಐವರು ಯುವಕರು ಸಿಮ್‌ ಕಾರ್ಡ್ ಖರೀದಿಸಿದ ಖಚಿತ ಮಾಹಿತಿ ಪಡೆದು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದಾಗ ಐವರು ಪತ್ತೆಯಾಗಿದ್ದು, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಈ ವೇಳೆ ಯುವಕರ ಬ್ಯಾಗ್ ನಲ್ಲಿದ್ದ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್ ಕಾರ್ಡ್ ಮತ್ತುp ಅವರ ಬಳಿ ಇದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದರು.

About The Author

Leave a Reply