
ಪುತ್ತೂರು: ದ.ಕ.ಜಿಲ್ಲೆಯ ಕುತ್ತಾರು ಮದನಿನಗರದಲ್ಲಿ ನಿನ್ನೆ ಕಂಪೌಂಡ್ ಕುಸಿದು ಮನೆಯ ಮೇಲೆಯೇ ಬಿದ್ದು ನಾಲ್ವರು ಮೃತಪಟ್ಟ ಘಟನೆಯ ನೆನಪು ಮರೆಯುವ ಮುನ್ನವೇ ಪುತ್ತೂರಿನಲ್ಲಿ ಮನೆ ಮೇಲೆಯೇ ತಡೆಗೋಡೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಘಟನೆ ನಡೆದಿದೆ. ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿ ಎಂಬಲ್ಲಿನ ಮಜೀದ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಜೂನ್ 27ರ ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆಯ ಮೇಲೆ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಪರಿಣಾಮ ಮನೆಯ ಅರ್ಧಭಾಗ ಕುಸಿದು ಮಜೀದ್ ಹಾಅಗೂ ಇಬ್ಬರು ಮಲಗಿದ್ದ ಕೊಠಡಿ ಮೇಲೆಯೇ ಬಿದ್ದಿದೆ. ತಕ್ಷಣ ಎಚ್ಚೆತ್ತ ಮಜೀದ್ ಅವರು ಮಣ್ಣಿನಡಿ ಸಿಲುಕಿದ್ದ ಮಕ್ಕಳಿಬ್ಬರನ್ನು ಪಾರು ಮಾಡಿದ್ದಾರೆ. ಆದ್ದರಿಂದ ಬಹುದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.


