April 22, 2026
WhatsApp Image 2024-12-12 at 9.25.38 AM

ಉಳ್ಳಾಲ: ಇಲ್ಲಿನ ಸೋಮೇಶ್ವರ ಕಡಲ ತೀರದ ರುದ್ರಪಾದೆಯಲ್ಲಿ ಪರ್ಸ್, ಪಾದರಕ್ಷೆ, ಕೂಲಿಂಗ್ ಗ್ಲಾಸ್ ಇಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಸಮುದ್ರದಲ್ಲಿ ಪತ್ತೆಯಾಗಿದೆ.

ಮಂಗಳೂರಿನ ಪಡೀಲು ವೀರನಗರ ನಿವಾಸಿ ಉದಯ್ ಕುಮಾರ್ (46) ಮೃತಪಟ್ಟ ವ್ಯಕ್ತಿ. ಉದಯ್ ಕುಮಾರ್ ಬುಧವಾರ ಮಧ್ಯಾಹ್ನ ಸೋಮೇಶ್ವರ ಸೋಮನಾಥ ಕ್ಷೇತ್ರದ ಮುಂಭಾಗ ತನ್ನ ಸ್ಕೂಟರ್ ನಿಲ್ಲಿಸಿ ಸಮುದ್ರ ತೀರದ ರುದ್ರಪಾದೆಯತ್ತ ತೆರಳಿದ್ದಾರೆ. ಬಳಿಕ ರುದ್ರಪಾದೆಯಲ್ಲಿ ಪರ್ಸ್, ಪಾದರಕ್ಷೆ, ಕೂಲಿಂಗ್ ಗ್ಲಾಸ್ ಇಟ್ಟು ನಾಪತ್ತೆಯಾಗಿದ್ದರು. ಬೀಚ್‌ನಲ್ಲಿ ಸುತ್ತಾಡುತ್ತಿದ್ದ ಹುಡಗನೊಬ್ಬ ರುದ್ರಪಾದೆಯಲ್ಲಿದ್ದ ಪರ್ಸ್‌ಅನ್ನು ಸ್ಥಳೀಯ ಗೂಡಂಗಡಿಯವರಿಗೆ ನೀಡಿದ್ದಾನೆ. ಅವರು ಪೊಲೀಸರಿಗೆ ಈ ವಿಚಾರ ತಿಳಿಸಿದ್ದಾರೆ.

ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸೇರಿದಂತೆ ಸ್ಥಳೀಯ ಈಜುಗಾರರು ಉದಯ್‌ರನ್ನು ಸಮುದ್ರದಲ್ಲಿ ರಬ್ಬರ್ ಟ್ಯೂಬ್ ಮೂಲಕ ಶೋಧಿಸಿದ್ದಾರೆ. ಸಂಜೆ ವೇಳೆ ಸೋಮೇಶ್ವರ ಕಡಲ ಕಿನಾರೆಯ ಅಲಿಮಕಲ್ಲು ಎಂಬಲ್ಲಿ ಉದಯ್ ಕುಮಾರ್ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಎಳೆದು ಮೇಲಕ್ಕೆ ಹಾಕಿದ್ದಾರೆ.

ಮೇಲ್ನೋಟಕ್ಕೆ ಉದಯ್ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಹಾಕ್ ಆಸ್ಪತ್ರೆಗೆ ಒಯ್ದಿದ್ದಾರೆ. ಮೃತ ಉದಯ್ ಅವರು ಪದವಿನಂಗಡಿಯಲ್ಲಿ ಕಟ್ಟಡ ಕಾಮಗಾರಿಯ ಬಿಡಿಭಾಗಗಳ ಮಾರಾಟದ ಅಂಗಡಿ ಹೊಂದಿದ್ದರು. ಮೃತರು ತಂದೆ, ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ.

About The Author

Leave a Reply