
ಮಂಗಳೂರು: ನಿಡ್ಡೋಡಿಯ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ಆರೋಪಿ ಶೇಖರ ಶೆಟ್ಟಿ ಅವರನ್ನು ಖುಲಾಸೆಗೊಳಿಸಿದೆ.



2016ರ ಜ. 12ರಂದು ನಿಡ್ಡೋಡಿಯ ಯಮುಲ ಮನೆ ನಿವಾಸಿ ರೇವತಿ ನಿಡ್ಡೋಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದವರು ಮರಳಿ ಬಂದಿರಲಿಲ್ಲ. ಅವರ ಅಣ್ಣ ತಿಮ್ಮಪ್ಪ ಮಡಿವಾಳ ಅವರು ತಂಗಿ ರೇವತಿ ಕಾಣೆಯಾಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದರು.
ಸ್ಥಳೀಯ ಶುಂಠಿಲ ಪದವಿನ ನಿವಾಸಿಯಾದ ಶೇಖರ ಶೆಟ್ಟಿ ಅವರ ಮೇಲೆ ಸಂಶಯವಿರುವುದಾಗಿ ತಿಮ್ಮಪ್ಪ ದೂರಿನಲ್ಲಿ ತಿಳಿಸಿದ್ದರು. ದೂರಿನ ಅನ್ವಯ ಶೇಖರ ಅವರನ್ನು ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಮಧ್ಯೆ ಶೇಖರ ಶೆಟ್ಟಿ ಮನೆಯನ್ನು ಬಿಟ್ಟು ಹೋಗಿದ್ದು, ಈ ಬಗ್ಗೆ ಅವರ ಪತ್ನಿ ದಯಾವತಿಯವರು ಶೇಖರ ಶೆಟ್ಟಿ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.
ಬಳಿಕ ಶೇಖರ ಶೆಟ್ಟಿ 2016 ಜ. 18ರಂದು ಠಾಣೆಗೆ ಹಾಜರಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ರೇವತಿ ಬೀಡಿ ಬ್ರಾಂಚಿಗೆಂದು ಶುಂಠಿಲ ಪದವಿಗೆ ಬರುತ್ತಿರುವಾಗ ಪರಿಚಯವಾಗಿದ್ದು ಅನ್ನೋನ್ಯವಾಗಿದ್ದರು. ಶೇಖರ್ಗೆ ಹಣದ ಸಮಸ್ಯೆ ಬಂದಾಗ ರೇವತಿಯ ಬಂಗಾರವನ್ನು ಪಡೆದು ಅಡವಿಟ್ಟು ಸಾಲ ಪಡೆಯುತ್ತಿದ್ದ. ಅದರಂತೆ 2015ರ ನವೆಂಬರ್ನಲ್ಲಿ ರೇವತಿ ಸರವನ್ನು ನೀಡಿದ್ದು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದನು. ಆ ಚಿನ್ನದ ಸರವನ್ನು ಬಿಡಿಸಿಕೊಡುವಂತೆ ರೇವತಿ ಆಗಾಗ ಒತ್ತಡ ಹೇರುತ್ತಿದ್ದರು. ಹೀಗಾಗಿ ರೇವತಿಯನ್ನು 2016ರ ಜ. 12ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವುದಾಗಿ ತಿಳಿಸಿದ್ದನು. ನಂತರ ಪೋಲಿಸರನ್ನು ಪಡ್ಡಗುರಿಗೆ ಕರೆದುಕೊಂಡು ಹೋಗಿ ರೇವತಿಯ ಶವವನ್ನು ತೋರಿಸಿದ್ದನು.
ಇನ್ನು ಡಿಎನ್ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಟಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ಎಂಬುದಾಗಿ ವರದಿ ಸೂಚಿಸುತ್ತದೆ ಎಂದು ಆರೋಪಿ ಪರ ವಕೀಲರು ವಾದಿಸಿದರು. ಇದನ್ನು ಪರಿಗಣಿಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ, ಪ್ರಾಸಿಕ್ಯೂಷನ್ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಗಮನಿಸಿ ಆರೋಪಿಗಳನ್ನು ಖುಲಾಸೆಗೊಳಿಸಿದರು.