ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಸ್ಥಳಗಳಲ್ಲಿ ಯುವಕರ ಮೇಲೆ ಚೂರಿ ಇರಿತ..!!

ಮಂಗಳೂರು: ಸಂಘಪರಿವಾರದ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಸ್ಥಳಗಳಲ್ಲಿ ಯುವಕರ ಮೇಲೆ ಚೂರಿ ಇರಿತ ನಡೆದಿದೆ. ಅಡ್ಯಾರ್ ಕಣ್ಣೂರು ಮತ್ತು ಉಳ್ಳಾಲದ ತೊಕ್ಕೋಟು ಒಳಪೇಟೆಯಲ್ಲಿ ಯುವಕರಿಗೆ ಚೂರಿ ಇರಿಯಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಮಂಗಳೂರು ಕಮಿಷನರ್ ವ್ಯಾಪ್ತಿಯ ಅಡ್ಯಾರ್ ಕಣ್ಣೂರು ಎಂಬಲ್ಲಿ ಬೈಕ್‌ನಲ್ಲಿ ಬಂದ ತಂಡವೊಂದು ಯುವಕನೋರ್ವನಿಗೆ ಚೂರಿ ಇರಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಯುವಕ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಅಡ್ಯಾರ್ ಕಣ್ಣೂರು ನಿವಾಸಿ ನೌಶಾದ್ ಎಂಬಾತ ತೊಕ್ಕೋಟು ಕಲ್ಲಾಪಿನ ಗ್ಲೋಬಲ್ ಮಾರುಕಟ್ಟೆಗೆ ತೆರಳಲು ಮುಂಜಾನೆ 3 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿರುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಎರಡು ಬೈಕ್‌ನಲ್ಲಿ ಬಂದ ನಾಲ್ವರ ತಂಡ ಚೂರಿಯಿಂದ ದಾಳಿಗೆ ಮುಂದಾಗಿದ್ದು ಈ ವೇಳೆ ಅಪಾಯವನ್ನು ಅರಿತ ನೌಶಾದ್ ಓಡಿ ಪಾರಾಗಿದ್ದಾನೆ ಎನ್ನಲಾಗಿದೆ. ಇರಿತದಿಂದ ನೌಶಾದ್ ಬೆನ್ನಿಗೆ ಅಲ್ಪ ಪ್ರಮಾಣದ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಉಳ್ಳಾಲದ ತೆಕ್ಕೋಟು ಒಳಪೇಟೆಯಲ್ಲಿ ಫೈಝಲ್ ಎಂಬ ಯುವಕನಿಗೆ ಚೂರಿ ಇರಿಯಲಾಗಿದ್ದು, ಬೆನ್ನಿಗೆ ಗಾಯವಾಗಿದೆ. ಫೈಝಲ್ ಕೂಡಾ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

Leave a Reply