May 25, 2026
IMG-20260525-WA0004

ಶಿವಮೊಗ್ಗ,: ಸರಗಳ್ಳತನ ಪ್ರಕರಣದಲ್ಲಿ ನವ ವಿವಾಹಿತನೋರ್ವ ಅರೆಸ್ಟ್​​ ಆಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮಂಜುನಾಥ್​​ ಬಂಧಿತ ಆರೋಪಿಯಾಗಿದ್ದು, ಕಾರಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಈತ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಓರ್ವ ಹೈಟೆಕ್​​ ಕಳ್ಳ ಎಂಬುದು ಗೊತ್ತಾಗಿದೆ. ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದಲ್ಲಿ ಮೇ 23ರಂದು ನಡೆದಿದ್ದ ಸರಗಳ್ಳತನ ಪ್ರಕರಣದ ಬೆನ್ನುಬಿದ್ದ ಪೊಲೀಸರು ಕೊನೆಗೂ ಆರೋಪಿಯನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.ಅಬ್ಬಲಗೇರಿ ಗ್ರಾಮದಲ್ಲಿ ಕಾರು ನಿಲ್ಲಿಸಿ ಪ್ರೇಮಿಗಳು ಮಾತನಾಡುತ್ತಿದ್ದ ವೇಳೆ ಕಾರಲ್ಲಿ ಬಂದಿದ್ದ ಆರೋಪಿ ಮಂಜುನಾಥ್, ಯುವತಿಯ ಕೊರಳಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ವೇಳೆ ಕಾರಿನ ನಂಬರ್​​ನ ಜೋಡಿ ಗಮನಿಸಿತ್ತು. ಆ ಆಧಾರದಲ್ಲಿ ಪ್ರೇಮಿಗಳು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನದ ಕುರಿತು ದೂರು ನೀಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು, ಹೈಟಕ್​​ ಕಳ್ಳ ಮಂಜುನಾಥ್​​ ಮತ್ತು ಆತ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾದ ಚಿನ್ನದ ಸರವನ್ನೂ ಪತ್ತೆ ಹಚ್ಚಿದ್ದಾರೆ.ಇನ್ನು ಆರೋಪಿ ಮಂಜುನಾಥ್​​ ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿಯಾಗಿದ್ದು, ಕಳೆದ 10 ದಿನಗಳ ಹಿಂದೆಯಷ್ಟೇ ಈತನಿಗೆ ಮದುವೆಯಾಗಿತ್ತು. ಕಳ್ಳತನ ಮಾಡಿ ಶೋಕಿ ಜೀವನ ನಡೆಸುವ ಖಯಾಲಿ ಹೊಂದಿದ್ದ ಈತ ಮದುವೆ ಬಳಿಕವೂ ಅದೇ ಕೆಲಸ ಮುಂದುವರಿಸಿದ್ದ.ಈ ಹಿಂದೆಯೂ ಕೂಡ ಈತ ಇದೇ ರೀತಿ ಪ್ರೇಮಿಗಳನ್ನೇ ಟಾರ್ಗೇಟ್ ಮಾಡಿ ಚಿನ್ನಾಭರಣ ಕಳ್ಳತನ ಮಾಡಿದ್ದನಂತೆ. ಆದರೆ ಆ ವೇಳೆ ಈತನ ವಿರುದ್ಧ ಯಾವುದೇ ಕೇಸ್ ದಾಖಲಾಗಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಪ್ರೇಮಿಗಳು ನೀಡಿದ್ದ ಕಾರಿನ ನಂಬರ್​​ ಮಾಹಿತಿ ಅಧಾರದಲ್ಲಿ ತನಿಖೆಗಿಳಿದ ಪೊಲೀಸರು ಈತನನ್ನು ಪತ್ತೆ ಮಾಡಿದ್ದು, ಮದುವೆಗೆಂದು ಮಾಡಿದ್ದ ಅಲಂಕಾರ ಕಾರಿಗೆ ಇನ್ನೂ ಹಾಗೇ ಇರುವುದು ಕಂಡು ಪೊಲೀಸರೇ ಶಾಕ್​​ ಆಗಿದ್ದಾರೆ. ಮಾಡಬಾರದ್ದನ್ನು ಮಾಡಲು ಹೋದವನೀಗ ಪತ್ನಿ ಜೊತೆ ಸುಖ ಸಂಸಾರ ನಡೆಸುವ ಬದಲು ಜೈಲು ಪಾಲಾಗಿದ್ದಾನೆ.

About The Author

Leave a Reply