May 25, 2026
fraud-2-1

ಕತಾರ್‌ನಿಂದ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುವ ಉದ್ಯಮದ ಹೆಸರಿನಲ್ಲಿ ಸ್ವಂತ ಮಾವನಿಗೆ ₹15.81 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಮಾನ್ಯ ನ್ಯಾಯಾಲಯದ ಖಾಸಗಿ ದೂರಿನ ಅನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್‌ ಅಜೀಜ್‌ (50) ವಂಚನೆಗೊಳಗಾದ ಪಿರ್ಯಾದಿದಾರರು. ಇವರ ಅಳಿಯ, ಕತಾರ್‌ನಲ್ಲಿ ಕೆಲಸ ಮಾಡುತ್ತಿರುವ 1ನೇ ಆರೋಪಿ ಮೊಹಮ್ಮದ್ ಶರ್ಪದ್ದೀನ್, ಕೇರಳ ತ್ರಿಶೂರು ಮೂಲದ 2ನೇ ಆರೋಪಿ ಮಹಮ್ಮದ್ ಶಾಹಿದ್ ಹಾಗೂ ತಮಿಳುನಾಡಿನ 3ನೇ ಆರೋಪಿ ಶಮೀಮ್ ಬಾನು ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.2023ರ ಅಕ್ಟೋಬರ್‌ನಲ್ಲಿ ಗೃಹಪ್ರವೇಶದ ಆಮಂತ್ರಣ ಪತ್ರಿಕೆ ನೀಡಲು ಉಡುಪಿಗೆ ಬಂದಿದ್ದ ಅಳಿಯ ಶರ್ಪದ್ದೀನ್, ಕತಾರ್‌ನಿಂದ ಖರ್ಜೂರ ತಂದು ಭಾರತದಲ್ಲಿ ಮಾರಿದರೆ ಭಾರಿ ಲಾಭ ಬರುತ್ತದೆ ಎಂದು ಮಾವ ಇಫ್ರಾನ್ ಅವರಿಗೆ ನಂಬಿಸಿದ್ದನು. ಬಳಿಕ 2024ರ ಡಿಸೆಂಬರ್‌ನಲ್ಲಿ ಕತಾರ್‌ನಿಂದಲೇ ಫೋನ್ ಮಾಡಿದ ಆತ, ತಾನು ಕೇರಳದ ಮಹಮ್ಮದ್ ಶಾಹಿದ್ ಮತ್ತು ತಮಿಳುನಾಡಿನ ಶಮೀಮ್ ಬಾನು ಅವರೊಂದಿಗೆ ಸೇರಿ ಪಾಲುದಾರಿಕೆಯಲ್ಲಿ ಈಗಾಗಲೇ ಬಿಸಿನೆಸ್ ಆರಂಭಿಸಿದ್ದು, ಭಾರಿ ಲಾಭ ಗಳಿಸುತ್ತಿರುವುದಾಗಿ ಸುಳ್ಳು ಹೇಳಿದ್ದನು.ಹಂತ ಹಂತವಾಗಿ ಹಣ ವರ್ಗಾವಣೆ:ವ್ಯಾಪಾರದಲ್ಲಿ ಹೂಡಿಕೆ ಮಾಡುವಂತೆ ಅಳಿಯ ನಿರಂತರವಾಗಿ ಒತ್ತಾಯ ಮಾಡಿದ್ದರಿಂದ, ಇಫ್ರಾನ್ ಅವರು ಬಿಸಿನೆಸ್ ಬಗ್ಗೆ ತಿಳಿಯಲು ಕತಾರ್‌ಗೆ ಬರುವುದಾಗಿ ಹೇಳಿದ್ದರು. ಆದರೆ ಆರೋಪಿಯು, “ನೀವು ಕತಾರ್‌ಗೆ ಬರುವ ಅಗತ್ಯವಿಲ್ಲ. ನಾನು ಈಗಾಗಲೇ ₹15 ಲಕ್ಷ ಮೌಲ್ಯದ ವಸ್ತುಗಳನ್ನು ಕೇರಳದ ಪಾಲುದಾರರಿಗೆ ಕಳುಹಿಸಿದ್ದೇನೆ. ನೀವು ಅವರಿಗೆ ಹಣ ಪಾವತಿಸಿದರೆ ಎರಡು ದಿನದಲ್ಲಿ ಸಾಮಗ್ರಿ ಉಡುಪಿಗೆ ತಲುಪುತ್ತದೆ” ಎಂದು ನಂಬಿಸಿದ್ದನು.ಅಳಿಯನ ಮಾತು ನಂಬಿದ ಇಫ್ರಾನ್ ಅವರು 2025ರ ಜನವರಿ 13ರಂದು ತಮ್ಮ ಉಡುಪಿಯ ಐಸಿಐಸಿಐ ಬ್ಯಾಂಕ್ ಖಾತೆಯಿಂದ 3ನೇ ಆರೋಪಿ ಶಮೀಮ್ ಬಾನು ಅವರ ಇಂಡಿಯನ್ ಬ್ಯಾಂಕ್ ಖಾತೆಗೆ ₹1,44,000 ಹಾಗೂ ಜನವರಿ 15ರಂದು 2ನೇ ಆರೋಪಿ ಮಹಮ್ಮದ್ ಶಾಹಿದ್ ಅವರ ಫೆಡರಲ್ ಬ್ಯಾಂಕ್ ಖಾತೆಗೆ ₹14,37,000 ಸೇರಿದಂತೆ ಒಟ್ಟು ₹15,81,000 ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.ಹಣ ಕೈ ಸೇರಿದ ಬಳಿಕ ಆರೋಪಿಗಳು ಯಾವುದೇ ಖರ್ಜೂರ ಅಥವಾ ಗೃಹೋಪಯೋಗಿ ವಸ್ತುಗಳನ್ನು ಉಡುಪಿಗೆ ಕಳುಹಿಸಿಕೊಟ್ಟಿಲ್ಲ. ಅಲ್ಲದೆ ಇಫ್ರಾನ್ ಅವರು ಫೋನ್ ಮಾಡಿದಾಗಲೂ ಆರೋಪಿಗಳ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು. ತಮಗೆ ವ್ಯವಸ್ಥಿತವಾಗಿ ವಂಚಿಸಿರುವುದನ್ನು ಅರಿತ ಇಫ್ರಾನ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.ಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026 ರಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318(4) (ವಂಚನೆ), 316(2) (ನಂಬಿಕೆ ದ್ರೋಹ) ಹಾಗೂ 3(2) (ಸಮಾನ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

Leave a Reply