

ಕಲಾಹಂಡಿ (ಒಡಿಶಾ) : ನಿರ್ಮಾಣ ಹಂತದಲ್ಲಿದ್ದ ಸೆಪ್ಟಿಕ್ ಟ್ಯಾಂಕ್ ಒಂದರ ಒಳಗಿದ್ದ ಕಡುಗತ್ತಲು ಮತ್ತು ಅದರಲ್ಲಿ ಅಡಗಿದ್ದ ಅದೃಶ್ಯ ರಾಕ್ಷಸನಂತಿದ್ದ ವಿಷಗಾಳಿ ಆರು ಅಮಾಯಕ ಜೀವಗಳನ್ನು ಬಲಿಪಡೆದಿದೆ. ಒಡಿಶಾದ ಕಲಾಹಂಡಿ ಜಿಲ್ಲೆಯ ಮದನ್ಪುರ್-ರಾಮ್ಪುರ್ ವ್ಯಾಪ್ತಿಯ ಗೌಡ್ ಕರ್ಲಾಖುಂಟಾ ಗ್ರಾಮದಲ್ಲಿ ಮಂಗಳವಾರ ಈ ಕರಳು ಹಿಂಡುವ ಘಟನೆ ನಡೆದಿದೆ. ಟ್ಯಾಂಕ್ ಒಳಗಿಳಿದವರು ಉಸಿರಾಡಲು ಪರದಾಡಿ ಜೀವಬಿಟ್ಟರೆ, ಅವರನ್ನು ಬದುಕಿಸಲು ಹೋದವರು ಕೂಡ ಮರಳಿ ಬರಲಾಗದ ಲೋಕಕ್ಕೆ ಪಯಣಿಸಿದ್ದಾರೆ.
ಗ್ರಾಮದ ಮನೆಯೊಂದರ ಹಿತ್ತಲಿನಲ್ಲಿ ಹೊಸದಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗುತ್ತಿತ್ತು. ಟ್ಯಾಂಕ್ನ ಕಾಂಕ್ರೀಟ್ ಕೆಲಸ ಮುಗಿದಿದ್ದರಿಂದ, ಅದರ ಒಳಗಿದ್ದ ಸೆಂಟರಿಂಗ್ ಹಲಗೆ ಹಾಗೂ ಕಬ್ಬಿಣದ ಕಂಬಿಗಳನ್ನು ಹೊರತೆಗೆಯಲು ಕಾರ್ಮಿಕರು ಸಜ್ಜಾಗಿದ್ದರು. ಮುಚ್ಚಲ್ಪಟ್ಟಿದ್ದ ಆಳವಾದ ಟ್ಯಾಂಕ್ನೊಳಗೆ ಮೊದಲು ಇಬ್ಬರು ಕಾರ್ಮಿಕರು ಇಳಿದಿದ್ದಾರೆ. ಆದರೆ, ಒಳಗೆ ಕಾದು ಕುಳಿತಿದ್ದ ವಿಷಕಾರಿ ಅನಿಲ ಮತ್ತು ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಅವರು ಇಳಿದ ಕೆಲವೇ ಸೆಕೆಂಡುಗಳಲ್ಲಿ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದಾರೆ.

ಒಳಗ ಹೋದವರು ಎಷ್ಟು ಹೊತ್ತಾದರೂ ಮಾತನಾಡದಿದ್ದಾಗ ಹೊರಗಿದ್ದವರಿಗೆ ಆತಂಕ ಶುರುವಾಗಿದೆ. ಒಳಗೇನಾಗಿದೆ ಎಂದು ನೋಡಲು ಮತ್ತು ಅವರನ್ನು ರಕ್ಷಿಸಲು ಒಬ್ಬರ ಹಿಂದೆ ಒಬ್ಬರಂತೆ ಇಳಿದಿದ್ದಾರೆ. ಆದರೆ ದುರದೃಷ್ಟವಶಾತ್, ಟ್ಯಾಂಕ್ ಒಳಗಿದ್ದ ಮಾರಕ ಅನಿಲದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ ರಕ್ಷಣೆಗೆ ಹೋದವರೂ ಸಹ ಪ್ರಜ್ಞೆ ತಪ್ಪಿ ಅಲ್ಲಿಯೇ ಬಿದ್ದಿದ್ದಾರೆ. ಕೇವಲ ಕೆಲವೇ ನಿಮಿಷಗಳಲ್ಲಿ ಇಡೀ ರಕ್ಷಣಾ ಕಾರ್ಯಾಚರಣೆ ದೊಡ್ಡ ದುರಂತವಾಗಿ ಮಾರ್ಪಟ್ಟಿತು. ಮೃತಪಟ್ಟವರಲ್ಲಿ ಮೂವರು ಮೇಸ್ತ್ರಿಗಳು, ಒಬ್ಬ ಕೂಲಿ ಕಾರ್ಮಿಕ ಸೇರಿದ್ದಾರೆ. ಅತ್ಯಂತ ದುಃಖದ ಸಂಗತಿಯೆಂದರೆ ಆ ಮನೆಯ ಮಾಲೀಕ ಮತ್ತು ಆತನ ಯುವ ಮಗ ಇಬ್ಬರೂ ಈ ದುರಂತದಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಆಡಳಿತ ಮಂಡಳಿ ಧಾವಿಸಿ ಸುದೀರ್ಘ ಕಾರ್ಯಾಚರಣೆಯ ಬಳಿಕ ಎಲ್ಲರನ್ನೂ ಹೊರತೆಗೆದಿದ್ದಾರೆ. ತಕ್ಷಣವೇ ಅವರನ್ನು ಮದನ್ಪುರ್-ರಾಮ್ಪುರ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತಾದರೂ, ಆರು ಜನ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮತ್ತೊಬ್ಬ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಜ್ಹಿ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳ ಆರ್ಥಿಕ ಸಹಾಯ ಘೋಷಿಸಿದ್ದಾರೆ. ಸುರಕ್ಷತಾ ಲೋಪದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.






