

ಧರ್ಮಸ್ಥಳ: ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ 7 ಅಸ್ಥಿಪಂಜರಗಳ ಗುರುತು ಪತ್ತೆ ಕಾರ್ಯವನ್ನು ಎಸ್ ಐಟಿ ಚುರುಕುಗೊಳಿಸಿದೆ ಎಂದು ತಿಳಿದುಬಂದಿದೆ. ಬಂಗ್ಲೆಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ 7 ಅಸ್ಥಿಪಂಜರಗಳ ಡಿಎನ್ ಎ ಪರೀಕ್ಷೆಗೆ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.ಇದರೊಂದಿಗೆ ರಾಜ್ಯದ ನಾನಾ ಭಾಗಳಿಂದ ನಾಪತ್ತೆಯಾಗಿರುವವರ ವಿವರಗಳನ್ನು ಎಸ್ ಐಟಿ ಸಂಗ್ರಹಿಸಿದೆ. ಕೇರಳ, ತೆಲಂಗಾಣ ಸೇರಿದಂತೆ ಧರ್ಮಸ್ಥಳ ಪೊಲೀಸ್ ಸ್ಟೇಷನ್ ಹಾಗೂ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವವರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇನ್ನಿತರ ಮೂಲಗಳಿಂದಲೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಧರ್ಮಸ್ಥಳ ಗ್ರಾಮದಲ್ಲಿ ನಾಪತ್ತೆಯಾದವರ ಬಗ್ಗೆ ಹೆಚ್ಚಿನ ನಿಗಾವಹಿಸಲಾಗುತ್ತಿದೆ.ಈಗಾಗಲೇ 8 ಕುಟುಂಬಗಳ ಜನರ ರಕ್ತದ ಮಾದರಿಗಳನ್ನು ಪಡೆಯಲಾಗಿದೆ. ಇನ್ನೂ 9 ಕುಟುಂಬಗಳ ರಕ್ತದ ಮಾದರಿಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷ ಸೆ.17 ಹಾಗೂ 18 ರಂದು ಬಂಗ್ಲೆಗುಡ್ಡೆಯ ಮೇಲ್ಭಾಗದಲ್ಲಿ ಎಸ್ ಐಟಿ ಶೋಧನೆ ಸಂದರ್ಭ ಈ 7 ಅಸ್ಥಿಪಂಜರಗಳು ಪತ್ತೆಯಾಗಿದ್ದವು.






