

ಕರ್ನಾಟಕ ಕಾಂಗ್ರೆಸ್ನಲ್ಲಿ ಮೇಜರಿ ಸರ್ಜರಿ ನಡೆದಿದ್ದು ಹೊಸದಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಎಐಸಿಸಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ ಪ್ರಕಟಿಸಿದ್ದು ಹೊಸ ಮುಖಗಳಿಗೆ ಮತ್ತು ಯುವ ನಾಯಕರಿಗೆ ಮಣೆ ಹಾಕಲಾಗಿದೆ.
ಬಹುನಿರೀಕ್ಷಿತ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಪದ್ಮರಾಜ್ ರಾಮಯ್ಯ ಪೂಜಾರಿ ನೇಮಕವಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪದ್ಮರಾಜ್ ಪೂಜಾರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಕಳೆದ 8 ವರ್ಷಗಳಿಂದ ಕೆ. ಹರೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ಸದ್ಯ ಅವರು ಮೆಸ್ಕಾಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ. ಹರೀಶ್ ಕುಮಾರ್ ಅವರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸತತ ಹಿನ್ನಡೆ ಅನುಭವಿಸಿತ್ತು.ಬಿಲ್ಲವ ಸಮುದಾಯದ ಹರೀಶ್ ಕುಮಾರ್ ಅವರ ತೆರವಾದ ಜಾಗಕ್ಕೆ ಬಿಲ್ಲವ ಸಮುದಾಯದವರೇ ಆಗಿರುವ ಪದ್ಮರಾಜ್ ಪೂಜಾರಿ ನೇಮಕವಾಗಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಜಿಲ್ಲಾ ಕಾಂಗ್ರೆಸ್ ನಾಯಕರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. 15ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಐಸಿಸಿ ವೀಕ್ಣಕರ ಮುಂದೆ ಹಕ್ಕು ಮಂಡಿಸಿದ್ದರು. ಅಂತಿಮವಾಗಿ ಎಐಸಿಸಿ ಪದ್ಮರಾಜ್ ಪೂಜಾರಿ ಅವರಿಗೆ ಮಣರ ಹಾಕಿದೆ. ಪದ್ಮರಾಜ್ ಪೂಜಾರಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಬೆಂಬಲಿಸಿದ್ದರು ಎಂದು ತಿಳಿದುಬಂದಿದೆ.







