

ವಿಟ್ಲ: ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ನಿಷ್ಠೆಯಿಂದ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಪೆರುವಾಯಿಯ ಹೆಮ್ಮೆಯ ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರಿಗೆ ವಿಶ್ವ ಹಿಂದೂ ಪರಿಷತ್–ಬಜರಂಗದಳ ಘಟಕ, ಶ್ರೀ ಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಭಾನುವಾರ ಅದ್ಧೂರಿ ಹುಟ್ಟೂರ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕುದ್ದುಪದವು ದಿವ್ಯ ಶಕ್ತಿ ಯುವಕ ಮಂಡಲದಿಂದ ಪೆರುವಾಯಿ ಕಲ್ಲಡ್ಕದವರೆಗೆ ಸುಮಾರು 10 ಕಿ.ಮೀ. ಬೃಹತ್ ವಾಹನ ಜಾಥಾ ನಡೆಯಿತು. ನಮ್ಮೂರಿನ ಹಿರಿಯರಾದ ನಿವೃತ್ತ ಶಿಕ್ಷಕ ಶ್ರೀ ರಾಮಯ್ಯ ಶೆಟ್ಟಿ ಅವರು ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ 200ಕ್ಕೂ ಅಧಿಕ ವಾಹನಗಳು ಹಾಗೂ 600ಕ್ಕೂ ಅಧಿಕ ರಾಷ್ಟ್ರಭಕ್ತರು ಭಾಗವಹಿಸಿದ್ದರು.
ಜಾಥಾ ಸಾಗಿದ ಮಾರ್ಗದುದ್ದಕ್ಕೂ ಸಾವಿರಾರು ಮಂದಿ ರಾಷ್ಟ್ರಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಹರ್ಷೋದ್ಗಾರಗಳೊಂದಿಗೆ ವೀರ ಯೋಧನಿಗೆ ಆತ್ಮೀಯ ಸ್ವಾಗತ ಕೋರಿದರು. ಮಾರ್ಗಮಧ್ಯದ ಹಲವು ಕಡೆಗಳಲ್ಲಿ ಆರತಿ ಬೆಳಗಿ, ಗೌರವ ಸಮರ್ಪಿಸಿ ಯೋಧನ ಸೇವೆಯನ್ನು ಸ್ಮರಿಸಲಾಯಿತು. ದಿವ್ಯ ಶಕ್ತಿ ಯುವಕ ಮಂಡಲ (ರಿ.), ಕುದ್ದುಪದವು ವತಿಯಿಂದಲೂ ಗೌರವಾರ್ಪಣೆಯೊಂದಿಗೆ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.

ದೇಶದ ಗಡಿಯನ್ನು ಕಾಯುವ ಹೊಣೆಗಾರಿಕೆಯಲ್ಲಿ 23 ವರ್ಷಗಳ ಅಮೂಲ್ಯ ಸೇವೆ ಸಲ್ಲಿಸಿದ ಯೋಧನಿಗೆ ತಾಯ್ನಾಡಿನ ಜನತೆ ತೋರಿದ ಪ್ರೀತಿ, ಗೌರವ ಮತ್ತು ಅಭಿಮಾನ ಕಾರ್ಯಕ್ರಮದ ಪಕ್ಷತೀತವಾಗಿ ವಿವಿಧ ವರ್ಗಗಳ ಜನರು ಭಾಗವಹಿಸಿ ವೀರ ಯೋಧನಿಗೆ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ ಮೆಲ್ಕಾರ್, ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಲೋಹಿತ್ ಪಣೋಲಿಬೈಲ್, ವಿಹಿಂಪ ಪ್ರಮುಖರಾದ ಪದ್ಮನಾಭ ಕಟ್ಟೆ, ರಾಧಾಕೃಷ್ಣ ಚೆಲ್ಲಡ್ಕ, ರಾಜೀವ್ ಭಂಡಾರಿ, ಸಾಹಿತಿ ಸವಿತಾ ಎಸ್. ಭಟ್, ದಿವ್ಯ ಶಕ್ತಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಪಾಟಾಳಿ ಕುದ್ದುಪದವು, ಯೋಧರ ಕುಟುಂಬದ ಹಿರಿಯರಾದ ರಾಮಣ್ಣ ಪೂಜಾರಿ, ಪೆರುವಾಯಿ ಘಟಕದ ಗೌರವಾಧ್ಯಕ್ಷ ಮಂಜುನಾಥ್ ಆಚಾರ್ಯ ಅಶ್ವಥನಗರ, ಅಧ್ಯಕ್ಷ ಶೇಖರ ಪೂಜಾರಿ ಕುಂಬಳಕೋಡಿ, ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಪೆರುವಾಯಿ, ಸಂಚಾಲಕರಾದ ವಿನೀತ್ ಕಾನ ಪೆರುವಾಯಿ, ಟಿ.ಆರ್. ನಾಗೇಶ್ ಪೆರುವಾಯಿ, ಸಂಘಟನೆ ಪ್ರಮುಖ ಯತೀಶ್ ಪೆರುವಾಯಿ ಸೇರಿದಂತೆ ಪರಿವಾರ ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಮಾತೆಯರು, ಗ್ರಾಮಸ್ಥರು ಹಾಗೂ ಪ್ರತ್ಯಕ್ಷ–ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಸಂಘಟಕರು ಕೃತಜ್ಞತೆ ಸಲ್ಲಿಸಿದ್ದಾರೆ.
“ವೀರ ಯೋಧನಿಗೆ ಸಲ್ಲಿಸಿದ ಗೌರವ — ದೇಶಕ್ಕೆ ಸಲ್ಲಿಸಿದ ಗೌರವ” ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮ ಪೆರುವಾಯಿಯ ದೇಶಭಕ್ತಿ, ಏಕತೆ ಮತ್ತು ವೀರ ಯೋಧರ ಮೇಲಿನ ಗೌರವಕ್ಕೆ ಸಾಕ್ಷಿಯಾಯಿತು.






