Visitors have accessed this post 348 times.
ಬಂಟ್ವಾಳ ತಾಲೂಕಿನ ವಗ್ಗದ ಸಮೀಪ ಕೊಪ್ಪಳ ಎಂಬಲ್ಲಿ ಸರ್ಕಾರಿ ಬಸ್ ಉರುಳಿ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ.
ಧರ್ಮಸ್ಥಳ ಮಂಗಳೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಇದಾಗಿದ್ದು, ಕೊಪ್ಪಳ ಎಂಬಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆಯ ಪಕ್ಕದ ಗುಂಡಿಗೆ ಬಸ್ ಉರುಳಿ ಬಿದ್ದಿದ್ದು ಬಸ್ನಲ್ಲಿದ್ದ ಹಲವರಿಗೆ ಗಾಯಗಳಾಗಿದೆ. ತಕ್ಷಣ ಸ್ಥಳೀಯ ಯುವಕರು ಸೇರಿ ಬಸ್ ಒಳಗಿದ್ದ ಪ್ರಯಾಣಿಕರನ್ನು ಬಸ್ ನಿಂದ ಹೊರ ತೆಗೆದಿದ್ದಾರೆ.
ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. ಬಸ್ ಬರುತ್ತಿರುವ ವೇಳೆ ಬೈಕ್ ಒಂದು ಅಡ್ಡ ಬಂದಿದ್ದು ಈ ವೇಳೆ ಬಸ್ ನಿಯಂತ್ರಿಸುವ ವೇಳೆ ರಸ್ತೆಯಿಂದ ಪಕ್ಕಕ್ಕೆ ಉರುಳಿದೆ ಎಂದು ಬಸ್ ಚಾಲಕ ಮಾಹಿತಿ ನೀಡಿದ್ದಾರೆ . ಆದರೆ ಸ್ಥಳಿಯರು ಇದನ್ನು ನಿರಾಕರಿಸಿದ್ದು ಬಸ್ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಿದ್ದಾರೆ.
ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡು ಘಟನೆಗೆ ಕಾರಣ ಏನು ಎಂಬ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.