Visitors have accessed this post 1300 times.
ನವದೆಹಲಿ: ಸೂಫಿ ಸಂತ ಖ್ವಾಜಾ ಮುಯಿನುದ್ದೀನ್ ಚಿಶ್ತಿ ಅವರ ಉರುಸ್ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅರ್ಪಿಸಿದ ಪವಿತ್ರ ಚಾದರ್, ಶನಿವಾರ ಅಜ್ಮೇರ್ ತಲುಪಿತು. ಚಾದರ್ಗೆ ಭವ್ಯ ಸ್ವಾಗತ ನೀಡಿದ ಅನುಯಾಯಿಗಳು, ಅದನ್ನು ಸಂಭ್ರಮದಿಂದ ದರ್ಗಾಕ್ಕೆ ಕರೆತಂದರು. ಚಾದರ್ ಅನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ಧಿಕಿ ಅವರು ನರೇಂದ್ರ ಮೋದಿ ಪರವಾಗಿ ಸಮರ್ಪಿಸಿದರು.
ಚಿಶ್ತಿ ಅವರ 811ನೇ ಉರುಸ್ ಅಂಗವಾಗಿ ಪ್ರಪಂಚದಾದ್ಯಂತ ಇರುವ ಅವರ ಅನುಯಾಯಿಗಳಿಗೆ ಶುಭಕೋರಿದ್ದ ಪ್ರಧಾನಿ ಮೋದಿ, ದೇಶದ ಸಾಮರಸ್ಯ ಪರಂಪರೆಯ ಬಗ್ಗೆ ಉಲ್ಲೇಖ ಮಾಡಿದ್ದರು. ಜ. 11ರಂದು ತಮ್ಮನ್ನು ಭೇಟಿ ಮಾಡಲು ಬಂದಿದ್ದ ದರ್ಗಾದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ, ಚಾದರ್ ಅರ್ಪಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಅಲ್ಪಸಂಖ್ಯಾತ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಹಾಗೂ ಜಮಾಲ್ ಸಿದ್ಧಿಕಿ ಇದ್ದರು. ಉರುಸ್ ಅಂಗವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಕೂಡ ಚಾದರ್ ಅರ್ಪಿಸಿದ್ದಾರೆ. ಮಾಜಿ ಸಚಿವ ನಾಸಿರ್ ಅಖ್ತರ್ ಅವರು ಗೆಹಲೋತ್ ಪರವಾಗಿ ಚಾದರ್ ನೀಡಿದ್ದಾರೆ.