
ಬಂಟ್ವಾಳ : ಮೆರೈನ್ ಇಂಜಿನಿಯರಿಂಗ್ ಮಾಡುತ್ತಿರುವ ಯುವಕನಿಗೆ ಇನ್ಸ್ಟಾಗ್ರಾಂ ಮೂಲಕ ಪರಿಚಿತನಾದ ವ್ಯಕ್ತಿಯೊಬ್ಬ ಮೆರೈನ್ ಕ್ಷೇತ್ರದಲ್ಲಿ ಕೆಲಸ ದೊರಕಿಸಿಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯುವಕ ಇದೀಗ ಪೊಲೀಸರ ಮೊರೆ ಹೋಗಿದ್ದಾನೆ. ಪೆರ್ನೆ ನಿವಾಸಿ ಭವಿತ್ ಕೆ ಎನ್ (23) ವಂಚನೆಗೊಳಗಾದ ಮೆರೈನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಾಗಿದ್ದು, ಆರೋಪಿಯನ್ನು ಪ್ರಜ್ವಲ್ ಎಂದು ಹೆಸರಿಸಲಾಗಿದೆ. ಭವಿತ್ ಅವರಿಗೆ ಪ್ರಜ್ವಲ್ ಎಂಬಾತ ಸಾಮಾಜಿಕ ಜಾಲತಣವಾದ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದು, ಆತನನ್ನು ಕಳೆದ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಭೇಟಿಯಾಗಿರುತ್ತಾನೆ. ಭೇಟಿ ವೇಳೆ ಮಾತುಕತೆ ನಡೆದು ಮೆರೈನ್ ಕೆಲಸಕ್ಕಾಗಿ 3 ಲಕ್ಷ ಖರ್ಚು ಇದೆ ಎಂದು ಹೇಳಿದಂತೆ ಭವಿತ್ ಅವರು ಜೂನ್ 16 ರಿಂದ ಆಗಸ್ಟ್ 28ರ ಅವಧಿಯಲ್ಲಿ ಹಂತ ಹಂತವಾಗಿ ಪ್ರಜ್ವಲ್ ಖಾತೆಗೆ ಒಟ್ಟು 2.10 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಬಳಿಕ ಪ್ರಜ್ವಲ್ ನಿಮಗೆ ಕೆಲಸ ಕೊಡಲು ಅಗುವುದಿಲ್ಲ. 10 ದಿನಗಳಲ್ಲಿ ನಿಮ್ಮ ಹಣ ವಾಪಾಸು ನೀಡುತ್ತೇನೆ ಎಂದು ಹೇಳಿ ನಂಬಿಸಿದ್ದು, ಇದುವರೆಗೆ ಭವಿತ್ ಅವರಿಗೆ ಕೆಲಸವೂ ನೀಡದೆ ಹಣವನ್ನೂ ವಾಪಾಸು ನೀಡದೆ ವಂಚಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2024 ಕಲಂ 417,420 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


