ದೇರಳಕಟ್ಟೆ : ಮಾದಕ ದ್ರವ್ಯದ ದುಶ್ಚಟದಿಂದ ದೇಶ ಮುಕ್ತವಾಗಬೇಕು. ಇದನ್ನು ನಿರ್ಮೂಲನೆ ಮಾಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ನಮ್ಮದು. ಸಮಾಜವನ್ನು ಜೋಡಿಸುವ ಕೆಲಸ ನಮ್ಮಿಂದ ಆಗಬೇಕೇ ಹೊರತು ವಿಭಜಿಸುವ ಕೆಲಸ ಆಗಬಾರದು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.
ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆ ಇದರ ವಾರ್ಷಿಕೋತ್ಸವದ ಪ್ರಯುಕ್ತ ಮಾದಕ ದ್ರವ್ಯ ಮತ್ತು ಅಪರಾಧ ಚಟುವಟಿಕೆಗಳ ಕುರಿತು ನಾಟೆಕಲ್ ಜಂಕ್ಷನ್ನಲ್ಲಿ ನಡೆದ ಜನ ಜಾಗೃತಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿಕ್ಕೂಚಿ ಭಾಷಣ ಮಾಡಿದ ವಿವಿ ಉಪಕುಲಪತಿ ಪ್ರೊ.ಧರ್ಮ, ಮಾದಕ ವಸ್ತುಗಳ ಜಾಲ ಅತ್ಯಧಿಕ ಸಂಖ್ಯೆಯಲ್ಲಿದ್ದು, ಇದು ಗಂಭೀರ ವಿಚಾರವಾಗಿದೆ. ಇದನ್ನು ನಿವಾರಣೆ ಮಾಡುವ ಕೆಲಸ ಆಗಬೇಕು. . ಈಗ ಮಂಗಳೂರು ಕೂಡ ಈ ಜಾಲದಲ್ಲಿ ಬೆಳೆದಿದ್ದು, ಬೆಂಗಳೂರನ್ನು ಮೀರಿ ನಿಂತಿದೆ ಎಂದು ಹೇಳಿದರು.
ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಪಿ.ಎಸ್.ಮೊಯ್ದಿನ್ ಕುಂಜ್ ಮಾದಕ ದ್ರವ್ಯದಿಂದ ಆಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು. ಎಸಿಪಿ ಗೀತಾ ಕುಲಕರ್ಣಿ, ರುಕ್ಸಾನ ಹಸನ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಟೆಕಲ್ ನಾಗರಿಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹಾಸೀಮ್ ಬಂಡಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಬೂಬಕರ್ ಹಾಜಿ ನಾಟೆಕಲ್, ಪಿ.ಎಸ್.ಹನೀಫ್, ಟಿ.ಎಸ್.ಅಬ್ದುಲ್ಲ ಸಾಮಣಿಗೆ ಮತ್ತಿತರರು ಉಪಸ್ಥಿತರಿದ್ದರು.
ಮೌಸೀರ್ ಅಹ್ಮದ್ ಸಾಮನಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು