
ಬೆಳ್ತಂಗಡಿ: ತಾಲೂಕಿನ ವೇಣೂರು ಠಾಣೆಯ ಪೆರಾಡಿಯಲ್ಲಿ ಪುರುಷ ಪೂಜೆ ಕಾರ್ಯಕ್ರಮದಲ್ಲಿ ಪ್ರವಾದಿ(ಸ.ಅ), ಅಝಾನ್ ಮತ್ತು ಮುಸ್ಲಿಂ ಸ್ತ್ರೀಯರನ್ನು ಅಶ್ಲೀಲವಾಗಿ ನಿಂದಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿಯವರ ನೇತೃತ್ವದಲ್ಲಿ ಬೆಳ್ತಂಗಡಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.



ಹಿಂದೂ ಸಂಪ್ರದಾಯಿಕ ಪುರುಷ ಪೂಜೆ ಆರಾಧನೆ ಆಚರಣೆಯಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯದ ಬಗ್ಗೆ, ಪ್ರವಾದಿ(ಸ.ಅ), ಅಝಾನ್, ನಮ್ಮ ಪಕ್ಷದ ದ್ವಜದ ದುರ್ಬಳಕೆ ಮತ್ತು ಮುಸ್ಲಿಂ ಸ್ತ್ರೀಯರನ್ನು ಅಶ್ಲೀಲವಾಗಿ ನಿಂದಿಸಿದ ಪ್ರಕರಣವು ಮುಸ್ಲಿಂ ಹಾಗೂ ಹಿಂದೂ ಸಮಾಜವನ್ನೇ ಎತ್ತಿಕಟ್ಟಿ ಕೋಮುಗಲಭೆಗೆ ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಹಿಂದೂ ಸಂಪ್ರದಾಯಿಕ ಪುರುಷ ಪೂಜೆ ಆರಾಧನೆ ನೈಜವಾಗಿಯೂ ಕರಾವಳಿ ಭಾಗದಲ್ಲಿ ನಡೆಯುತ್ತದೆ. ಪುರುಷ ಕಟ್ಟು ಪೂಜೆ ಜನಪದ ಕಥೆಯಲ್ಲಿ ವಿವರಿಸಿದಂತೆ
ನಾಥ ಪಂಥದವರ ಆರಾಧನಾ ಕೇಂದ್ರವಾಗಿರುವ ಕದ್ರಿ ಮಂಜುನಾಥ ( ಹಿಂದೆ ಮಂಜುಶ್ರೀ ಬೌದ್ಧ ವಿಹಾರ) ದೇವಾಲಯದಲ್ಲಿ ಪೂಜಿಸಲ್ಪಡುವ ಶಿವನು ಒಮ್ಮೆ ಕದ್ರಿ ಗುಡ್ಡದ ಮೇಲಿನಿಂದ ಪಶ್ಚಿಮ ಘಟ್ಟಗಳ ಸೌಂದರ್ಯವನ್ನು ನೋಡುವಾಗ ಘಟ್ಟ ಪ್ರದೇಶದ ತಪ್ಪಲು ಭಾಗದಲ್ಲಿ ಕಾಡಿನಂಚಿನಲ್ಲಿ ವಾಸಿಸುತ್ತಿರುವ ಜನರು ಕೃಷಿ ಚಟುವಟಿಕೆಗಳಲ್ಲಿ ತಲ್ಲೀನರಾಗಿರುವುದನ್ನು ಮತ್ತು ಅವರುಗಳು ಯಾವುದೇ ಅತಿಮಾನುಷ ಶಕ್ತಿಗಳನ್ನು ಪೂಜಿಸದೆ ತಮ್ಮಷ್ಟಕ್ಕೆ ಕೃಷಿ ಚಟುವಟಿಕೆಗಳನ್ನು ಮಾತ್ರವೇ ಮಾಡುತ್ತಿರುವುದನ್ನು ನೋಡುತ್ತಾನೆ ಮತ್ತು ಆಶ್ಚರ್ಯ ಚಕಿತನಾಗುತ್ತಾನೆ. ಕರಾವಳಿ ಭಾಗದಲ್ಲಿ ನನ್ನನ್ನು ಮತ್ತು ನನ್ನ ಪರಿವಾರಗಳಾದ ದೈವಗಳನ್ನು ಭಕ್ತಿ ಪೂರ್ವಕವಾಗಿ ಪೂಜಿಸುತ್ತಾರೆ ಆದರೆ ಕಾಡಿನ ಭಾಗದ ಜನರೇಕೆ ಯಾವುದೇ ಆರಾಧನೆ ಮಾಡದೇ ಜೀವಿಸುತ್ತಿದ್ಜಾರೆ ಎಂದು ನಾಥ ಪಂಥದವರಲ್ಲಿ ಕೇಳುತ್ತಾನೆ ಮತ್ತು ಆ ಜನರನ್ನು ಭೇಟಿಯಾಗಬೇಕೆಂದು ನಿರ್ಧರಿಸಿ ಹೊರಡುತ್ತಾನೆ. ಈ ಸಂದರ್ಭದಲ್ಲಿ ಶಿವನ ಪತ್ನಿ ಪಾರ್ವತಿ ಕೂಡಾ ಶಿವನೊಂದಿಗೆ ಹೊರಡುತ್ತಾಳೆ. ಹೋಗುವಾಗ ದಾರಿ ಮಧ್ಯೆ ಬೊಳ್ಳುಕಲ್ ಸಾಹೇಬ್ ಎನ್ನುವ ಮುಸ್ಲಿಂ ವ್ಯಾಪಾರಿಯೊಬ್ಬ ಎದುರುಗೊಳ್ಳುತ್ತಾನೆ. ಈತನ ಬಳಿ ಶಿವನು ತಾನು ತಲುಪಬೇಕಾದ ಸ್ಥಳದ ಬಗ್ಗೆ ತಿಳಿಸುವಾಗ ಆ ಮುಸ್ಲಿಂ ವ್ಯಾಪಾರಿಯು ನೀವು ಹೀಗೆ ಹೋದರೆ ಸಮಸ್ಯೆ ಎದುರಾಗಬಹುದು ಆದ್ದರಿಂದ ಬುಡಕಟ್ಟು ಜನಾಂಗದ ವೇಷವನ್ನು ಧರಿಸಿ ಹೋಗುವುದು ಒಳ್ಳೆಯದು ಎನ್ನಲಾಗಿ ಶಿವನು ಕೊರವನಾಗಿ ಪಾರ್ವತಿಯು ಕೊರವಂತಿಯಾಗಿ ವೇಷ ಬದಲಾಯಿಸುತ್ತಾರೆ. ಆ ಬಳಿಕ ಆ ಮುಸ್ಲಿಂ ವ್ಯಾಪಾರಿ ಅವರಿಬ್ಬರನ್ನು ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿಗೆ ತಲುಪಿದ ಬಳಿಕ ಅಲ್ಲೇ ಕೆಲ ಕಾಲ ಅಲ್ಲಿನ ಜನರೊಂದಿಗೆ ಶಿವನು ಕೃಷಿ ಚಟುವಟಿಕೆಗಳನ್ನು ಮಾಡುತ್ತಿರಲು ಒಂದು ದಿನ ಆ ಜನಾಂಗದವರಿಗೆ ಶಿವಪಾರ್ವತಿಯರ ಬಗ್ಗೆ ತಿಳಿದುಕೊಳ್ಳಲು ಅವರು ತಮ್ಮ ನಿಜರೂಪವನ್ನು ತೋರಿಸುತ್ತಾರೆ. ಇದರಿಂದ ತುಂಬಾ ಸಂತಸಪಟ್ಟ ಆ ಬುಡಕಟ್ಟು ಜನಾಂಗದವರು ಅಂದಿನಿಂದ ಶಿವಪಾರ್ವತಿಯರ ಆರಾಧನೆ ಮತ್ತು ಶಿವನ ಗಣಗಳಾದ ನೂರಾ ಒಂದು ದೈವಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಶಿವನು ಬುಡಕಟ್ಟು ಜನಾಂಗದವರ ಬಳಿಗೆ ಬಂದ ಚೈತ್ರ ಮಾಸದ ಹುಣ್ಣಿಮೆಯಂದು ಪುರುಷ ಕಟ್ಟನು ಆರಾಧನೆ ಶುರುವಾಯಿತೆಂದು ಹೇಳಲಾಗುತ್ತದೆ. ಆದರೆ ಇಂದು ಇದಲ್ಲದ ಕೆಲವೊಂದು ವೇಷ ಧರಿಸಿ ಒಂದು ಸಮುದಾಯವನ್ನು ನಿಂದಿಸಿರುವುದು ಸ್ಪಷ್ಟವಾಗಿದೆ. ಮಾತ್ರವಲ್ಲದೆ ನಿಂದಿಸಿದ ಆರೋಪಿಗಳ ಮೇಲೆ FIR ದಾಖಲಾಗಿದ್ದರೂ ರಜಾರೋಷವಾಗಿ ತಿರುಗಾಡುತ್ತಾ ಇದ್ದಾರೆ. ಇನ್ನೂ ಕೂಡ ಅವರ ಬಂಧನವಾಗಲಿಲ್ಲ ಇದೊಂದ ಒತ್ತಡದ ಮೇಲೆ ಪೊಲೀಸರು ಎಫ್ ಐ ಆರ್ ದಾಖಳಿಸಿದಂತೆ ತೋರುತ್ತದೆ ಎಂದು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಶರೀಫ್ ಕಟ್ಟೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಂಚು ರೂಪಿಸಿರುವ ಕೃತ್ಯದ ವಿರುದ್ಧ ಯಾವುದೇ ಸೆಕ್ಷನ್ ಹಾಗೂ ಪಕ್ಷದ ಧ್ವಜ ಕಳ್ಳತನ ಮಾಡಿ ದುರ್ಬಳಕೆ ಮಾಡಿದವರ ಮೇಲೆ FIR ದಾಖಲು ಮಾಡಿಲ್ಲ. ಕಳ್ಳತನ ಮಾಡಿರುವ ಕುರಿತ ಸೆಕ್ಷನ್ ಗಳನ್ನ ಕೂಡ ಹಾಕಲಿಲ್ಲ ಎಂಬುವುದಾಗಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಅಡ್ವೋಕೇಟ್ ಕಬೀರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಲ್ಲದಿದ್ದರೆ ವೇಣೂರು ಪೊಲೀಸ್ ಠಾಣಾ ಮುಂಭಾಗದಲ್ಲಿ ದೊಡ್ಡ ಮಟ್ಟದ ಧರಣಿಯ ನಡೆಸಲಾಗುವುದು ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಬೆಳ್ತಂಗಡಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರು ನಿಸಾರ್ ಕುದ್ರಡ್ಕ ಹಾಗೂ ವೇಣೂರು ಬ್ಲಾಕ್ ಅಧ್ಯಕ್ಷರು ಅಶ್ರಫ್ ಬದ್ಯಾರ್ ಉಪಸ್ಥಿತರಿದ್ದರು.