

ನವದೆಹಲಿ: ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುತ್ತಿದ್ದೇವೆ ಎಂದರೆ ಮುಸ್ಲಿಮರಿಗೂ ಮೀಸಲಾತಿ ನೀಡುತ್ತಿದ್ದೇವೆ ಎಂದು ಅರ್ಥವಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಲೋಕಸಭೆಯಲ್ಲಿ ಇಂದು ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಸ್ಲಿಮರಿಗೆ ಮೀಸಲಾತಿ ನೀಡುವುದಿಲ್ಲ. ಒಂದು ವೇಳೆ ಮೀಸಲಾತಿ ನೀಡಿದರೆ ಅದು ಧರ್ಮಾಧರಿತ ಮೀಸಲಾತಿ ಎನಿಸಿಕೊಳ್ಳುತ್ತದೆ. ಧರ್ಮಾಧರಿತ ಮೀಸಲಾತಿ ನೀಡುವುದಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲವಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಸಮಾಜವಾದಿ ಪಕ್ಷದ ಸಂಸದರಾದ ಅಖಿಲೇಶ್ ಯಾದವ್ ಹಾಗೂ ಧರ್ಮೆಂದ್ರ ಯಾದವ್ ಅವರು ಮುಸ್ಲಿಮರಿಗೆ ಮೀಸಲಾತಿ ಬೇಕು ಎನ್ನುವುದರ ಪರವಾಗಿ ಮಾತನಾಡಿದರು.
ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿ ಸುಮಾರು 40 ನಿಮಿಷ ಮಾತನಾಡಿದ ಅಮಿತ್ ಶಾ, ಸಮಾಜವಾದಿ ಸೇರಿದಂತೆ ವಿರೋಧ ಪಕ್ಷದ ನಾಯಕರುಗಳ ಕಾಲೆಳೆದರು.
ನಾವೀಗ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೊಳಿಸಲು ಸಿದ್ದವಾಗಿದ್ದೇವೆ. ಹಾಗಾಗಿ ಸಮಾಜವಾದಿ ಪಕ್ಷವೂ ಬೇಕಿದ್ದರೆ ತನ್ನ ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮ್ ಮಹಿಳೆಯರಿಗೇ ಟಿಕೆಟ್ ನೀಡಲಿ ಎಂದು ಕಿಚಾಯಿಸಿದರು.
ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಜಾತಿ ಜನಗಣತಿಯ ಬಗ್ಗೆಯೂ ಪ್ರಮುಖವಾಗಿ ಪ್ರಸ್ತಾಪಿಸಿದರು.
ಸಮಾಜವಾದಿ ಪಕ್ಷದವರು ಜಾತಿ ಗಣತಿ ಬೇಕು ಎನ್ನುತ್ತಿದ್ದಾರೆ. ಆದರೆ 2027ರ ಜನಗಣತಿಯ ಜೊತೆ ಜಾತಿ ಗಣತಿಯನ್ನೂ ನಡೆಸಲಾಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ ಎನ್ನುವಂತೆ ಕಾಣುತ್ತದೆ. ಸದ್ಯ ಮನೆಗಳ ಗಣತಿ ಮಾತ್ರ ನಡೆದಿದೆ. ಒಂದು ವೇಳೆ ಸಮಾಜವಾದಿ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಮನೆಗಳಿಗೂ ಜಾತಿ ಹೆಸರಿಡುತ್ತಿತ್ತು ಎಂದು ಛೇಡಿಸಿದರು.
ಜಾತಿ ಗಣತಿ ನಡಿಸಿಯೇ ನಡೆಸುತ್ತೇವೆ. ನನಗೂ ವೈಯಕ್ತಿಕವಾಗಿ ಆ ಬಗ್ಗೆ ತುಂಬಾ ಕುತೂಹಲವಿದೆ ಎಂದು ಸಮಾಜವಾದಿ ಪಕ್ಷದ ನಾಯಕರ ಕಾಲೆಳೆದರು.
ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಅವರು ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ಪುನರ್ ವಿಂಗಡಣಾ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು.
ಈ ವೇಳೆ ವಿರೋಧ ಪಕ್ಷಗಳು ಸಂವಿಧಾನ ವಿರೋಧಿ ಕ್ರಮ ಎಂದು ತೀವ್ರ ಪ್ರತಿಭಟನೆ ನಡೆಸಿದವು.
ಸಂವಿಧಾನ (131ನೇ ತಿದ್ದುಪಡಿ) ಮಸೂದೆ- 2026, ಕ್ಷೇತ್ರ ಮರುವಿಂಗಡಣೆ ಮಸೂದೆ-2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆ-2026 ಇಂದು ಮಂಡನೆಯಾದ ಮಸೂದೆಗಳು.






