

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಜಾಬ್, ಪವಿತ್ರ ದಾರ, ರುದ್ರಾಕ್ಷಿ, ಶಿವಧಾರ, ಪೇಟ ಇತ್ಯಾದಿ ಅಸ್ತಿತ್ವದಲ್ಲಿರುವ ಧಾರ್ಮಿಕ ಆಚರಣೆಗಳಿಗೆ ಮಾತ್ರ ಅವಕಾಶ, ಹೊಸದಾಗಿ ಕೇಸರಿ ಶಾಲು ಪರಿಚಯಿಸುವಂತಿಲ್ಲ ಎಂಬುದು ಸರ್ಕಾರದ ನಿಲುವು.
ಇದೇ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಮಂತರ್ ಗೌಡ ಅವರು “ಕೇಸರಿ ಶಾಲು ಹಾಕಿಕೊಂಡು ಶಾಲಾ-ಕಾಲೇಜಿಗೆ ಬನ್ನಿ” ಎಂದು ಹೇಳಿಕೆ ನೀಡಿರುವುದು ಅಚ್ಚರಿಯನ್ನುಂಟು ಮಾಡಿದೆ. ಕೂರ್ಗ್ ಡೈಲಿಯಲ್ಲಿ ಪ್ರಕಟವಾದ ಈ ವರದಿ ಹಲೋಲಕಲ್ಲೋಲ ಸೃಷ್ಟಿಸಿದೆ.

ಮುಖ್ಯಮಂತ್ರಿಗಳೇ ನಿಷೇಧಿಸಿರುವ ವಿಷಯವನ್ನು, ಅದೇ ಸರ್ಕಾರದ ಪಕ್ಷದ ಶಾಸಕರು ಬಹಿರಂಗವಾಗಿ ಪ್ರತಿಪಾದಿಸುವುದು ಕಾಂಗ್ರೆಸಿನ ಶಾಸಕರ ಮನಸ್ಥಿತಿ ಇನ್ನೂ ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ. ಶಿಸ್ತು, ಸಮವಸ್ತ್ರ ಸಂಹಿತೆ, ಸಾಮರಸ್ಯದ ಬಗ್ಗೆ ಮಾತನಾಡುವ ಸರ್ಕಾರವೇ ತನ್ನ ಶಾಸಕರನ್ನು ಹತೋಟಿಗೆ ತರಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮಡಿಕೇರಿಯ ಜನರು ಇಂತಹ ಹೇಳಿಕೆ ನೀಡುವ ಶಾಸಕರನ್ನು ಆಯ್ಕೆ ಮಾಡಿದ್ದಾರಾ? ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ, ಧಾರ್ಮಿಕ ಪ್ರದರ್ಶನದ ವೇದಿಕೆಯಾಗಿ ಪರಿವರ್ತಿಸುವ ಈ ರೀತಿಯ ಹೇಳಿಕೆಗಳು ಜಿಲ್ಲೆಯ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ. ಶಾಲಾ-ಕಾಲೇಜುಗಳು ವಿದ್ಯೆಯ ಕೇಂದ್ರವಾಗಬೇಕು, ವಿವಾದದ ಕೇಂದ್ರವಾಗಬಾರದು.
ಇಂತಹ ಜವಾಬ್ದಾರಿಯಿಲ್ಲದ ಹೇಳಿಕೆಗಳಿಂದ ರಾಜ್ಯಾದ್ಯಂತ ಗೊಂದಲ ಸೃಷ್ಟಿಯಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಮತದಾರರು ಇಂತಹ ದ್ವಂದ್ವ ನಿಲುವು ತೋರುವ ಶಾಸಕರನ್ನು ಬದಲಾಯಿಸುವುದು ಅಗತ್ಯವಾಗಿದೆ. ಮಡಿಕೇರಿ ಜಿಲ್ಲೆಗೆ ಇದು ದುರಂತಕರ ಬೆಳವಣಿಗೆ. ಎಂದು ಸಾಮಾಜಿಕ ಕಾರ್ಯ ಕರ್ತ ರಿಯಾಝ್ ಹರೇಕಳ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಿಯಾಝ್ ಹರೇಕಳ






