May 30, 2026
image (45)

ಬೆಂಗಳೂರು: ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ನೂತನ ಸಿಎಂ ಆಯ್ಕೆ ಸಂಬಂಧ ಇಂದು (ಮೇ 30) ಸಿಎಲ್​​ಪಿ ಸಭೆ ಕರೆಯಲಾಗಿದೆ. ಡಿ.ಕೆ. ಶಿವಕುಮಾರ್ ​​ ಅವರೇ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಕನ್ಫರ್ಮ್​​ ಆಗಿರುವ ಹಿನ್ನೆಲೆ ಅವರು ಹಾಲಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆಯೂ ಹಲವರು ಕಣ್ಣಿಟ್ಟಿದ್ದಾರೆ. ಹೀಗಿದ್ದರೂ ಈ ಸ್ಥಾನಕ್ಕೆ ಸತೀಶ್​​ ಜಾರಕಿಹೊಳಿ ಹೆಸರು ಈವರೆಗೂ ಮುಂಚೂಣಿಯಲ್ಲಿತ್ತು. ಆದರೆ ರಾಜ್ಯ ಕಾಂಗ್ರೆಸ್​​ನ ಅಧ್ಯಕ್ಷ ಗಾದಿಗೆ ಈಗ ಮತ್ತೋರ್ವರ ಹೆಸರು ಸಪ್ರೈಸ್​ ಎಂಟ್ರಿ ಆಗಿರೋದು ಭಾರಿ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ಗೆ ಹರಿಪ್ರಸಾದ್​​ ಎಂಟ್ರಿ!

ಕೆಪಿಸಿಸಿ ಅಧ್ಯಕ್ಷರ ರೇಸ್​​ನಲ್ಲಿ ಬಿ.ಕೆ.ಹರಿಪ್ರಸಾದ್ ಹೆಸರು ದಿಢೀರ್​​ ಮುನ್ನೆಲೆಗೆ ಬಂದಿದ್ದು, ಒಬಿಸಿ ಕೋಟಾದಡಿ ಪಕ್ಷದ ಅಧ್ಯಕ್ಷ ಗಾದಿಯನ್ನು ಅವರಿಗೆ ನೀಡುವ ಸಂಬಂಧವೂ ಚರ್ಚೆ ನಡೆದಿದೆ. ಮಂತ್ರಿಸ್ಥಾನಕ್ಕೆ ಸತೀಶ್ ಪಟ್ಟು ಹಿಡಿದರೆ ಕಾಂಗ್ರೆಸ್‌ ಹೈಕಮಾಂಡ್ ಎದುರು ಹರಿಪ್ರಸಾದ್ ಹೆಸರು ಪ್ರಸ್ತಾಪ ಸಾಧ್ಯತೆ ಇದ್ದು, ಹರಿಪ್ರಸಾದ್​ಗೆ ಕೆ.ಸಿ.ವೇಣುಗೋಪಾಲ್ ಬೆಂಬಲ ಕೂಡ ಇದೆ ಎನ್ನಲಾಗಿದೆ. ಇಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಹಿರಿಯ ಶಾಸಕರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪವನ್ನೂ ನಿರೀಕ್ಷಿಸಲಾಗಿದೆ.

ಹೈಕಮಾಂಡ್​​ಗೆ ತಲೆನೋವಾಗಿದ್ದೇನು?

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮೊದಲಿನಿಂದಲೂ ಮುಂಚೂಣಿಯಲ್ಲಿತ್ತು. ಮಂತ್ರಿ ಸ್ಥಾನ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನೂ ಸತೀಶ್​​ ಬೇಡಿಕೆ ಇಟ್ಟಿದ್ದರು. ಆದರೆ ಅವರ ಈ ಬೇಡಿಕೆಯೇ ಹೈಕಮಾಂಡ್​​ಗೆ ತಲೆನೋವಾಗಿದೆ ಎನ್ನಲಾಗ್ತಿದೆ. ಒಂದು ವ್ಯಕ್ತಿ, ಒಂದು ಸ್ಥಾನ ಎಂಬ ನೀತಿಯನ್ನು ಕಾಂಗ್ರೆಸ್ ಹೈಕಮಾಂಡ್ ಅನುಸರಿಸುತ್ತಿದೆ. ಈ ನೀತಿಯು ಈಗಾಗಲೇ ಅನೇಕ ರಾಜ್ಯಗಳಲ್ಲಿ ಜಾರಿಯಲ್ಲಿದೆ. ಹಾಗಾಗಿ, ಜಾರಕಿಹೊಳಿ ಅವರ ಈ ಬೇಡಿಕೆ ಹೈಕಮಾಂಡ್‌ಗೆ ಸವಾಲಾಗಿದೆ.

ಸತೀಶ್​​ ಲೆಕ್ಕಾಚಾರವೇನು?

ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಮಾತ್ರ ಸ್ವೀಕರಿಸಿದರೆ, ಬೆಳಗಾವಿ ಜಿಲ್ಲೆಯಲ್ಲಿ ಅವರ ರಾಜಕೀಯ ಹಿಡಿತ ದುರ್ಬಲಗೊಳ್ಳಬಹುದು ಎಂಬ ಆತಂಕದಲ್ಲಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಲಕ್ಷ್ಮಣ ಸವದಿ ಅವರಂತಹವರು ಜಿಲ್ಲಾ ಉಸ್ತುವಾರಿ ಸಚಿವರಾದರೆ, ಜಾರಕಿಹೊಳಿಯವರ ರಾಜಕೀಯ ಪ್ರಭಾವ ಕುಸಿಯುವ ಸಾಧ್ಯತೆಯಿದೆ. ಅವರ ಅಹಿಂದಾ ರಾಜಕಾರಣದ ಮೇಲೂ ಇದರ ಪರಿಣಾಮ ಉಂಟಾಗಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ.

About The Author

Leave a Reply