June 12, 2026
bengaluru

ಬೆಂಗಳೂರು : ಐದೂವರೆ ವರ್ಷದ ಕಂದಮ್ಮ ಪಿ. ವೆನ್ನೆಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಮಗುವಿನ ಹೆತ್ತ ತಾಯಿ, ವಕೀಲೆ ಪ್ರಿಯಾಂಕಾ (44) ಅವರನ್ನು ಕಾಡುಗೋಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಫಾರ್ಮ್‌ಹೌಸ್ ಒಂದರಲ್ಲಿ ಅಡಗಿದ್ದ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.ದಾವಣಗೆರೆಯಲ್ಲಿ ಖಾಸಗಿ ಶಾಲೆಯ ಮಾಲೀಕರಾಗಿರುವ ಪ್ರಿಯಾಂಕಾ ಮತ್ತು ಅವರ ಪತಿ ಪ್ರವೀಣ್ ಇತ್ತೀಚೆಗೆ ಬೇರ್ಪಟ್ಟಿದ್ದರು. ಪ್ರಿಯಾಂಕಾ ತನ್ನ ಲಿವ್-ಇನ್ ಪಾರ್ಟ್ನರ್, ರಿಯಲ್ ಎಸ್ಟೇಟ್ ಡೆವಲಪರ್ ಮೋಹನ್ ಜಿ. ಮಹಾಲಿಂಗಪ್ಪ (40) ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಳು. ಮಾರ್ಚ್ 24ರ ರಾತ್ರಿ ಪ್ರಿಯಾಂಕಾ ಇಂದಿರಾನಗರದಲ್ಲಿ ಶಾಪಿಂಗ್‌ಗೆ ಹೋಗಿದ್ದಾಗ, ಮಗು ವೆನ್ನೆಲಾ ಕಾರಿನಲ್ಲಿ ಮೋಹನ್ ಜೊತೆ ಇತ್ತು. ಈ ವೇಳೆ ಮಗು ಐಸ್‌ಕ್ರೀಂ ಕೇಳಿದ್ದು, ಮೋಹನ್ ತಂದುಕೊಟ್ಟ ಫ್ಲೇವರ್ ಬೇಡವೆಂದು ಬೇರೆ ಫ್ಲೇವರ್ ತರುವಂತೆ ಹಠ ಹಿಡಿದಿತ್ತು. ಇದರಿಂದ ಕೋಪಗೊಂಡ ಮೋಹನ್ ಮಗುವಿನ ಹೊಟ್ಟೆಗೆ ಬಲವಾಗಿ ಹೊಡೆದಿದ್ದಾನೆ. ಮಗು ನೋವು ತಾಳಲಾರದೆ ಜೋರಾಗಿ ಅಳಲು ಪ್ರಾರಂಭಿಸಿದಾಗ ಆತನೂ ಬಾಯಿ ಮತ್ತು ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.ಅಪರಾಧವನ್ನು ಮುಚ್ಚಿಡಲು ಪ್ರಿಯಾಂಕಾ ತನ್ನ ಕುಟುಂಬಕ್ಕೆ ಎರಡು ವಿಭಿನ್ನ ಸುಳ್ಳು ಕಥೆಗಳನ್ನು ಹೇಳಿದ್ದಳು. ಒಮ್ಮೆ ಮಗು ಊಟ ಮಾಡಿ ಮಲಗಿ ಮೃತಪಟ್ಟಿದೆ ಎಂದರೆ, ಇನ್ನೊಮ್ಮೆ ಕೋಲಾರದ ರೆಸ್ಟೋರೆಂಟ್ ಬಳಿ ಕಾರಿನಲ್ಲಿ ಎಸಿ ಆನ್ ಮಾಡಿ ಮಲಗಿಸಿದ್ದಾಗ ಸಾವನ್ನಪ್ಪಿದೆ ಎಂದು ನಂಬಿಸಲು ಯತ್ನಿಸಿದ್ದಳು. ಮಗುವಿನ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂದು ವರದಿ ಬಂದಿದ್ದರೂ ಪೊಲೀಸರು ಆರಂಭದಲ್ಲಿ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಅನುಮಾನಗೊಂಡ ಪ್ರಿಯಾಂಕಾ ಮೊದಲ ಪತಿ ಪ್ರವೀಣ್, ವಿದೇಶದಲ್ಲಿದ್ದ ತನ್ನ ಸಹೋದರಿ (ಮಕ್ಕಳ ವೈದ್ಯೆ) ಮೂಲಕ ಲೋಕಾಯುಕ್ತ ಐಜಿಪಿಗೆ ದೂರು ನೀಡುವಂತೆ ಮಾಡಿದ್ದರು. ಲೋಕಾಯುಕ್ತದ ಹಸ್ತಕ್ಷೇಪದ ಬಳಿಕವೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಿಯಾಂಕಾ ತನ್ನ ಮೊಬೈಲ್ ಫೋನ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಮೋಹನ್‌ನ ಸ್ನೇಹಿತನಿಗೆ ಸೇರಿದ ಸಕಲೇಶಪುರದ ಫಾರ್ಮ್‌ಹೌಸ್‌ನಲ್ಲಿ ಅಡಗಿಕೊಂಡಿದ್ದಳು. ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಕೊಲೆಯಲ್ಲಿ ತಾಯಿಯ ಪಾತ್ರ ಮತ್ತು ಸಾಕ್ಷ್ಯ ನಾಶದ ಕುರಿತು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

About The Author

Leave a Reply