July 6, 2026
WhatsApp Image 2026-07-06 at 9.31.50 AM

ಉಡುಪಿ: ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಇನ್ಮುಂದೆ ತುರ್ತು ಕರೆ ಬಂದ ಕೇವಲ 15 ನಿಮಿಷಗಳಲ್ಲಿ 108 ಆಂಬುಲೆನ್ಸ್ಗಳು ನಿಗದಿತ ಸ್ಥಳಕ್ಕೆ ತಲುಪಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ವಿಳಂಬ ಮಾಡಿದರೆ, ಸಂಬಂಧಪಟ್ಟ ಆಂಬುಲೆನ್ಸ್ ಚಾಲಕರಿಗೆ 5,000 ರೂಪಾಯಿ ಭಾರಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ರಾಷ್ಟ್ರೀಯ ಆಂಬುಲೆನ್ಸ್ ಸೇವೆಗಳ ಮಾರ್ಗಸೂಚಿಯ ಪ್ರಕಾರ ತುರ್ತು ಕರೆ ಬಂದ 20 ನಿಮಿಷಗಳ ಒಳಗೆ ವಾಹನ ಸ್ಥಳಕ್ಕೆ ತಲುಪಬೇಕಿರುತ್ತದೆ. ಜೀವ ಉಳಿಸುವಲ್ಲಿ ಅತ್ಯಂತ ನಿರ್ಣಾಯಕವಾಗಿರುವ ‘ಗೋಲ್ಡನ್ ಅವರ್’ (ಚಿನ್ನದ ಸಮಯ) ಪರಿಕಲ್ಪನೆಯನ್ನು ಆಧರಿಸಿ ಈ ನಿಯಮ ರೂಪಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತಷ್ಟು ಕಠಿಣ ನಿಯಮ ರೂಪಿಸಲಾಗುತ್ತಿದ್ದು, ಕಾಲಮಿತಿಯನ್ನು 15 ನಿಮಿಷಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಆಪತ್ತಿನಲ್ಲಿರುವಾಗ ಮೊದಲ 15 ನಿಮಿಷಗಳಲ್ಲಿ ಚಾಲಕರು ಸ್ಥಳಕ್ಕೆ ಧಾವಿಸಿದರೆ ಶೇಕಡಾ 90 ರಷ್ಟು ಆರೋಗ್ಯ ಸಮಸ್ಯೆಗಳನ್ನು ಹಾಗೂ ಪ್ರಾಣಾಪಾಯವನ್ನು ತಡೆಯಲು ಸಾಧ್ಯವಾಗುತ್ತದೆ. ಸದ್ಯ ರಾಜ್ಯಾದ್ಯಂತ 700 ರಿಂದ 800 ಆಂಬುಲೆನ್ಸ್ಗಳು ಕಾರ್ಯಾಚರಣೆಯಲ್ಲಿದ್ದು, ಇಡೀ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವ ಅಗತ್ಯವಿದೆ. ಈ ಹೊಸ ದಂಡದ ನಿಯಮ ಹಾಗೂ ಮಾರ್ಗಸೂಚಿಗಳ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಇಡೀ ಪ್ರಕ್ರಿಯೆ ಸಂಪೂರ್ಣವಾಗಿ ಜಾರಿಗೆ ಬರಲು ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

About The Author

Leave a Reply