July 9, 2026
WhatsApp Image 2026-07-09 at 5.22.45 PM

​ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಶಾಮೀಲಾಗಿರುವುದಕ್ಕೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಕೆನಡಾದ ರಾಷ್ಟ್ರೀಯ ಪೊಲೀಸ್ ಸಂಸ್ಥೆ (RCMP) ಸ್ಪಷ್ಟಪಡಿಸಿದೆ. ಈ ಮಹತ್ವದ ಹೇಳಿಕೆಯು ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ. ಇದರ ಬೆನ್ನಲ್ಲೇ, ಅಮೆರಿಕದ ತನಿಖಾ ಸಂಸ್ಥೆಗಳು ಬಿಡುಗಡೆ ಮಾಡಿರುವ ಹೊಸ ದೋಷಾರೋಪ ಪಟ್ಟಿಯಲ್ಲಿ (ಇಂಡಿಕ್ಟ್‌ಮೆಂಟ್), ನಿಜ್ಜರ್ ಹತ್ಯೆಯ ಹಿಂದೆ ಭಾರತದ ಜೈಲಿನಲ್ಲಿರುವ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಆಪ್ತ ಗೋಲ್ಡಿ ಬ್ರಾರ್ ನೇರ ಕೈವಾಡ ಹೊಂದಿರುವುದು ಬಹಿರಂಗವಾಗಿದೆ.

2023 ರ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೇ ನಗರದ ಗುರುದ್ವಾರದ ಹೊರಗೆ ನಿಜ್ಜರ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಆಗ ಕೆನಡಾದ ಅಂದಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹತ್ಯೆಯಲ್ಲಿ ಭಾರತೀಯ ಏಜೆಂಟರ ಹಸ್ತಕ್ಷೇಪ ಇರುವ ಬಗ್ಗೆ “ವಿಶ್ವಾಸಾರ್ಹ ಆರೋಪಗಳು” ಇವೆ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು ಉಭಯ ದೇಶಗಳ ನಡುವಿನ ಬಾಂಧವ್ಯ ತಳ ಮುಟ್ಟುವಂತೆ ಮಾಡಿತ್ತು. ಭಾರತ ಈ ಆರೋಪವನ್ನು ತಳ್ಳಿಹಾಕಿತ್ತು.


​ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್‌ನ (RCMP) ಡೆಪ್ಯುಟಿ ಕಮಿಷನರ್ ಲಿಸಾ ಮೊರೆಲ್ಯಾಂಡ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಸಂಘಟಿತ ಅಪರಾಧ ಜಾಲದ ಕುರಿತು ನಮ್ಮ ತನಿಖಾಧಿಕಾರಿಗಳು ನಡೆಸಿರುವ ಸುದೀರ್ಘ ಶೋಧನೆಯಲ್ಲಿ ಭಾರತ ಸರ್ಕಾರದ ಅಧಿಕಾರಿಗಳು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಅಥವಾ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ” ಎಂದು ತಿಳಿಸಿದ್ದಾರೆ. ಈ ಹೇಳಿಕೆಯು ಭಾರತದ ನಿಲುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬೆಂಬಲ ನೀಡಿದೆ. ಮತ್ತೊಂದೆಡೆ, ಅಮೆರಿಕದ ಲಾಸ್ ಏಂಜಲೀಸ್ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ತನಿಖಾ ವರದಿಯ ಪ್ರಕಾರ, 2015 ರಿಂದ ಭಾರತದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತನ್ನ ಅಂತರ್ಜಾಲ ಜಾಲದ ಮೂಲಕ ಕೆನಡಾದಲ್ಲಿದ್ದ ನಿಜ್ಜರ್ ಹತ್ಯೆಗೆ ಆದೇಶ ನೀಡಿದ್ದನು ಎಂದು ಉಲ್ಲೇಖಿಸಲಾಗಿದೆ.

ಬಿಷ್ಣೋಯ್ ಗ್ಯಾಂಗ್‌ನ ಉತ್ತರ ಅಮೆರಿಕದ ಮುಖ್ಯಸ್ಥ ಮತ್ತು ಭಾರತದ ಅತ್ಯಂತ ವಾಂಟೆಡ್ ಕ್ರಿಮಿನಲ್ ಆಗಿರುವ ಸತಿಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಎಫ್‌ಬಿಐ (FBI) ಜುಲೈ 1, 2026 ರಂದು ಅಧಿಕೃತವಾಗಿ ಬಂಧನ ವಾರಂಟ್ ಹೊರಡಿಸಿದ್ದು, ಆತನ ಪತ್ತೆಗೆ 50,000 ಡಾಲರ್ ಬಹುಮಾನ ಘೋಷಿಸಿದೆ.
​ಅಮೆರಿಕ, ಕೆನಡಾ ಮತ್ತು ಯುರೋಪ್ ದೇಶಗಳ ಜಂಟಿ ನೇತೃತ್ವದಲ್ಲಿ ನಡೆದ ‘ಆಪರೇಷನ್ ಹಾರ್ಡ್‌ಬಾಲ್’ (Operation Hardball) ಎಂಬ ಬೃಹತ್ ಕಾರ್ಯಾಚರಣೆಯಡಿಯಲ್ಲಿ ಈ ಅಂತರರಾಷ್ಟ್ರೀಯ ಅಪರಾಧ ಜಾಲವನ್ನು ಧ್ವಂಸಗೊಳಿಸಲಾಗಿದೆ. ಭಾರತ ಮೂಲದ ಮೂರು ಪ್ರಮುಖ ಅಂತರ್ರಾಷ್ಟ್ರೀಯ ಗ್ಯಾಂಗ್‌ಗಳು ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಡಯಾಸ್ಪೊರಾ (ವಲಸಿಗರು) ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ವಾಟ್ಸಾಪ್‌ ಸೇರಿದಂತೆ ಎನ್‌ಕ್ರಿಪ್ಟ್ ಮಾಡಿದ ಆ್ಯಪ್‌ಗಳ ಮೂಲಕ ಹಣಕ್ಕಾಗಿ ಸುಲಿಗೆ, ಹಫ್ತಾ ವಸೂಲಿ, ಮಾದಕ ದ್ರವ್ಯ ಸಾಗಣೆ ಮತ್ತು ಹತ್ಯೆಗಳಿಗೆ ಸಂಚು ರೂಪಿಸುತ್ತಿದ್ದವು. ಈ ಕಾರ್ಯಾಚರಣೆಯಲ್ಲಿ ಕ್ಯಾಲಿಫೋರ್ನಿಯಾದಲ್ಲಿ 11 ಮತ್ತು ಕೆನಡಾದಲ್ಲಿ 3 ಮಂದಿ ಸೇರಿದಂತೆ ಒಟ್ಟು 24 ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 37 ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದ್ದು, ಇಬ್ಬರು ಪ್ರಮುಖ ಸೂತ್ರಧಾರಿಗಳು ಭಾರತದ ಜೈಲುಗಳ ಒಳಗಿಂದಲೇ ಈ ಜಾಗತಿಕ ಅಪರಾಧ ಸಾಮ್ರಾಜ್ಯವನ್ನು ನಡೆಸುತ್ತಿದ್ದರು ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ. ಈ ಮೂಲಕ ನಿಜ್ಜರ್ ಹತ್ಯೆಯು ರಾಜಕೀಯ ಪ್ರೇರಿತವಲ್ಲ, ಬದಲಿಗೆ ಅಂತರ್ರಾಷ್ಟ್ರೀಯ ಗ್ಯಾಂಗ್‌ಸ್ಟರ್‌ಗಳ ನಡುವಿನ ಸಂಘಟಿತ ಅಪರಾಧದ ಭಾಗ ಎಂಬುದು ಸಾಬೀತಾಗಿದೆ.

About The Author

Leave a Reply