

ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ಭೋಜಶಾಲಾ ಸರಸ್ವತಿ ದೇವಿಯ ದೇವಾಲಯವೆಂದು ಘೋಷಿಸಿರುವ ಮಧ್ಯಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ. ಆ ಕುರಿತ ವರದಿ ಇಲ್ಲಿದೆ.
ಭೋಜಶಾಲಾ ಪಕ್ಕದಲ್ಲಿ ನಮಾಜ್
ಶುಕ್ರವಾರದಂದು ನಮಾಜ್ ಮಾಡುವ ಸಲುವಾಗಿ ಮುಸ್ಲಿಮರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, ಭೋಜಶಾಲಾ-ಕಮಲ್ ಮೌಲಾ ಮಸೀದಿ ಆವರಣದಲ್ಲಿ ಮಧ್ಯಂತರವಾಗಿ ನಮಾಜ್ ಮಾಡಲು ಅವಕಾಶ ನಿರಾಕರಿಸಿದೆ. ಈ ಕುರಿತು ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಪಾಡಲು ಮಧ್ಯಂತರ ಆದೇಶ ನೀಡಿದೆ.
ಮುಂದುವರೆದು, ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಆದೇಶವನ್ನು ನಾವು ಹೊರಡಿಸಲು ಸಾಧ್ಯವಿಲ್ಲ ಎಂದ ಪೀಠ, ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಮುಸ್ಲಿಮ್ ಕಡೆಯವರಿಗೆ ನಮಾಜ್ ಮಾಡಲು ಭೋಜಶಾಲಾ ಪಕ್ಕದಲ್ಲೇ ಪ್ರತ್ಯೇಕ ಮುಕ್ತ ಸ್ಥಳವನ್ನು ತಾತ್ಕಾಲಿಕವಾಗಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರೊಂದಿಗೆ ಈ ವ್ಯವಸ್ಥೆಯು ಅಂತಿಮ ತೀರ್ಪು ಸಿಗುವವರೆಗೆ ತಾತ್ಕಾಲಿಕವಾಗಿದ್ದು, ಇದರಿಂದ ಯಾರಿಗೂ ಹಾನಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದರೊಂದಿಗೆ ಲಂಡನ್ ವಸ್ತುಸಂಗ್ರಹಾಲಯದಿಂದ ಭೋಜಶಾಲೆಗೆ ಸಂಬಂಧಿಸಿದ ಸರಸ್ವತಿ ದೇವಿಯ ವಿಗ್ರಹವನ್ನು ಮರಳಿ ತರುವ ಬಗ್ಗೆ ಸರ್ಕಾರ ಪರಿಗಣಿಸಬೇಕು ಎಂಬ ಹೈಕೋರ್ಟ್ ನಿರ್ದೇಶನದ ಬಗ್ಗೆಯೂ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.
11 ನೇ ಶತಮಾನದ ಭೋಜಶಾಲೆ ಸಂಕೀರ್ಣವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಕ್ಷಣೆಯಲ್ಲಿದೆ. ಇನ್ನು, ಹಿಂದೂಗಳು ಇದನ್ನು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವೆಂದು ನಂಬುತ್ತಾರೆ. ಆದರೆ ಮುಸ್ಲಿಮರು ಇದನ್ನು ಕಮಲ್ ಮೌಲಾ ಮಸೀದಿ ಎಂದು ಹೇಳುತ್ತಾರೆ.
ಇನ್ನು ವಿವಾದದ ಕುರಿತ ವಿಚಾರಣೆ ನಡೆಸಿದ ಮಧ್ಯ ಪ್ರದೇಶ ಹೈಕೋರ್ಟ್, 2003ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮುಸ್ಲಿಮರಿಗೆ ಶುಕ್ರವಾರದ ನಮಾಜ್ಗೆ ಕಲ್ಪಿಸಿದ್ದ ಅವಕಾಶ ರದ್ದು ಮಾಡಿ, ವಿವಾದಿತ ಜಾಗವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವೆಂದು ಮೇ 15 ರಂದು ತೀರ್ಪು ನೀಡಿತ್ತು.






