August 13, 2026
WhatsApp Image 2026-08-13 at 3.02.08 PM

ಮಂಗಳೂರು: ಪಣಂಬೂರಿನಲ್ಲಿ ಜೂನ್ 29ರಂದು ನಡೆದ ಜ್ಯುವೆಲ್ಲರಿ ಉದ್ಯಮಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಮೂಲದ ಮಿಥುನ್ ಲಾಲ್ ಹಾಗೂ ಶ್ರೀರಾಗ್, ಮಡಿಕೇರಿ ಮೂಲದ ಉಬೇದ್ ಮತ್ತು ಜಿಯಾದ್ ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಶ್ರೀರಾಗ್ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐ ಪಕ್ಷದ ಸ್ಥಳೀಯ ಮಟ್ಟದ ನಾಯಕನಾಗಿದ್ದು, ದರೋಡೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ತನಿಖೆ ಚುರುಕುಗೊಂಡ ಬೆನ್ನಲ್ಲೇ ಶ್ರೀರಾಗ್ ವಕೀಲರ ಮೂಲಕ ಮಂಗಳೂರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಮಿಥುನ್, ಉಬೇದ್ ಮತ್ತು ಜಿಯಾದ್ ಕೂಡ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದರು. ಈ ವೇಳೆ ಮಿಥುನ್‌ನನ್ನು ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿ ಬಂಧಿಸಲಾಗಿದ್ದು, ಉಬೇದ್ ಮತ್ತು ಜಿಯಾದ್ ಪಡೀಲ್‌ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಇನೋವಾ ಹಾಗೂ ಸ್ವಿಫ್ಟ್ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ 10 ಗ್ರಾಂ ತೂಕದ ಚಿನ್ನದ ಉಂಗುರ, ಜ್ಯುವೆಲ್ಲರಿ ವ್ಯಾಪಾರಿಗೆ ಹಲ್ಲೆ ಮಾಡಲು ಬಳಸಿದ್ದ ಎನ್ನಲಾದ ಕಬ್ಬಿಣದ ರಾಡ್ ಮತ್ತು ಗ್ಲೌಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ

ಪ್ರಕರಣದ ಪ್ರಮುಖ ಆರೋಪಿಯೆಂದು ಗುರುತಿಸಲಾಗಿರುವ ಶಿಜಿನ್ ಗಂಗಾಧರನ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಬಂಧಿತ ಆರೋಪಿಗಳ ವಿಚಾರಣೆಯಲ್ಲಿ ದೋಚಿದ ಚಿನ್ನ ಅಥವಾ ಹಣ ತಮ್ಮ ಬಳಿ ಇಲ್ಲ ಎಂದು ತಿಳಿಸಿದ್ದಾರೆ. ಒಂದು ಚಿನ್ನದ ಉಂಗುರ ಮಾತ್ರ ಪತ್ತೆಯಾಗಿದ್ದು, ಆರೋಪಿಗಳು ಅದನ್ನು ಮಾರಾಟ ಮಾಡಿದ್ದ ಸ್ಥಳದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೂನ್ 29ರಂದು ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಧನವಡೆ ಅವರು ಮಹಾರಾಷ್ಟ್ರದ ಸಾಂಗ್ಲಿಯಿಂದ ಹಿಂದಿರುಗುತ್ತಿದ್ದ ವೇಳೆ ಪಣಂಬೂರು ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಇನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದವರು ಅವರ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದರು. ಈ ವೇಳೆ ಸುಮಾರು 180 ಗ್ರಾಂ ಚಿನ್ನ ಹಾಗೂ ನಗದು ಸೇರಿದಂತೆ ಒಟ್ಟು ₹20 ಲಕ್ಷ ಮೌಲ್ಯದ ಸೊತ್ತು ಕಳವಾಗಿತ್ತು ಎಂದು ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದರೋಡೆಗೆ ಬಳಸಿದ್ದ ಸ್ವಿಫ್ಟ್ ಡಿಸೈರ್ ಕಾರು ಮರುದಿನವೇ ಬಂಟ್ವಾಳ ಬಳಿಯ ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು. ಕಾರಿನ ಸೀಟ್ ಹರಿದು ಒಳಗೆ ಚಿನ್ನದ ಗಟ್ಟಿ ಅಥವಾ ಹವಾಲಾ ಹಣವಿದೆಯೇ ಎಂಬುದನ್ನು ಹುಡುಕಿದಂತೆ ಕಂಡುಬಂದಿತ್ತು.

ಈ ಪ್ರಕರಣದಲ್ಲಿ ಈಗಾಗಲೇ ಕಣ್ಣೂರು ಮೂಲದ ನಿಮಿಲ್ ಹಾಗೂ ಆರೋಪಿಗಳಿಗೆ ಪರಾರಿಯಾಗಲು ಸಹಕರಿಸಿದ ಆರೋಪದ ಮೇಲೆ ಕೊಡಗು ಮೂಲದ ಇರ್ಶಾದ್ ಮತ್ತು ಮುಸ್ತಾಫ ಅವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ನಾಲ್ವರು ಆರೋಪಿಗಳ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಮಂಗಳೂರು ಪೊಲೀಸರು ಈ ಹಿಂದೆ 13 ಮಂದಿ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿ ಅವರ ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿದ್ದರು. ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇರುವುದರಿಂದ ಪೊಲೀಸರು ತನಿಖೆ ಹಾಗೂ ಶೋಧ ಕಾರ್ಯ ಮುಂದುವರಿಸಿದ್ದಾರೆ.

About The Author

Leave a Reply