September 1, 2026
WhatsApp Image 2026-09-01 at 2.42.58 PM

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಂಕಾರ ನಗರ, ಬಂಟ್ಸ್ ಹಾಸ್ಟೆಲ್, ಮಂಗಳೂರು ಇದರ ವತಿಯಿಂದ ಬಂಟ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 6 ರಂದು ಬೆಳಗ್ಗೆ 9 ಗಂಟೆಯಿಂದ ಮಂಗಳೂರು ಬಂಟ್ಸ್ ಹಾಸ್ಟೇಲ್ ಬಂಟರ ಮಾತೃ ಸಂಘದ ಆವರಣ ಮತ್ತು ಶ್ರೀ ರಾಮಕೃಷ್ಣ ಶಾಲಾ ಮೈದಾನದಲ್ಲಿ ಅಂತರ್ ಜಿಲ್ಲಾ ಮಟ್ಟದ ಬಂಟ ಕ್ರೀಡೋತ್ಸವ ಆಯೋಜಿಸಲಾಗಿದೆ ಎಂದು ಸಿದ್ದಿ ವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕ್ರೀಡಾ ಕೂಟದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಕ್ರೀಡಾಪಟುಗಳು ಸಕ್ರಿಯವಾಗಿ ಭಾಗವಹಿಸಲು ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಕ್ರೀಡಾ ಕೂಟದಲ್ಲಿ ಒಂದನೇ ತರಗತಿಯಿಂದ 70ನೇ ವಯೋಮಾನದ ವರೆಗಿನ ಬಂಟ ಬಾಂಧವರಿಗೆ ಭಾಗವಹಿಸುವಂತೆ ಅನುಕೂಲವಾಗುವ ವಿವಿಧ ಕ್ರೀಡಾಕೂಟಗಳನ್ನು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಮಹಿಳೆಯರಿಗೆ ತ್ರೋಬಾಲ್, ಹಗ್ಗ ಜಗ್ಗಾಟ, ವಿವಿಧ ಜಾನಪದ ಕ್ರೀಡೆಗಳು ಸೇರಿದಂತೆ ನಾನಾ ಆಕರ್ಷಕ ಕ್ರೀಡಾ ಸ್ಪರ್ಧೆಗಳಿವೆ. ಹಾಗೆಯೇ ಪುರುಷರಿಗೆ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದಲ್ಲದೆ ಸ್ಥಳದಲ್ಲೇ ಮನೋರಂಜನಾ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುವುದು. ಇದರ ಜತೆಗೆ ಮೂರು ವರ್ಷದ ಒಳಗಿನ ಪುಟಾಣಿಗಳಿಗೆ ಮುದ್ದು ಕೃಷ್ಣ ಮತ್ತು 4 ವರ್ಷದಿಂದ 6 ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.
ಅಂದು ಬೆಳಗ್ಗೆ 10 ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ನಾನಾ ಕ್ಷೇತ್ರದ ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಗೌರವಿಸಲಾಗುವುದು. ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಈ ಕ್ರೀಡಾಕೂಟದ ಸಮಾರೋಪ ಸಮಾರಂಭವು ಅಂದು ಸಂಜೆ ನಡೆಯಲಿದ್ದು, ವಿಜೇತ ಕ್ರೀಡಾ ಪಟುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಡಾ. ಆಶಾಜ್ಯೋತಿ ರೈ, ಜಗಧೀಶ್ ಶೆಟ್ಟಿ ಬಿಜೈ, ಸದಾಶಿವ ಶೆಟ್ಟಿಬಿಜೈ ಉಪಸ್ಥಿತರಿದ್ದರು.

About The Author

Leave a Reply