

ಪುತ್ತೂರು ಹಿಂದೂ ಜಾಗರಣ ವೇದಿಕೆ ಬಿ.ಜೆ.ಪಿ. ಸಂಘ ಪರಿವಾರದ ಮೆರವಣಿಗೆಯಲ್ಲಿ ಮುಸ್ಲಿಮರ ವಿರುದ್ಧ ನಿಂದನಾತ್ಮಕ ಘೋಷಣೆ, ಪೊಲೀಸರಿಗೆ ಧಿಕ್ಕಾರ ಕೂಗುವಿಕೆ ಕಾರ್ಯಕ್ರಮ ಆಯೋಜಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದ.ಕ. ಜಿಲ್ಲಾಧಿಕಾರಿಗಳಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಬಿ.ಜೆ.ಪಿ. ಹಿಂದೂ ಜಾಗರಣ ವೇದಿಕೆ, ಸಂಘ ಪರಿವಾರ ಪುತ್ತೂರಿನಲ್ಲಿ ಆಯೋಜಿಸಿದ ಪುತ್ತೂರು ಚಲೋ ಮೆರವಣಿಗೆಯಲ್ಲಿ ಕೋಮು ದ್ವೇಷ ಹರಡುವ ಉದ್ದೇಶದಿಂದ ಮುಸ್ಲಿಮರ ವಿರುದ್ಧ ಹಲವಾರು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ. ಮುಸ್ಲಿಮರನ್ನು ಪಾಕಿಸ್ತಾನದ ನಾಯಿಗಳು, ಬಾಂಗ್ಲಾದೇಶದ ಕಳ್ಳಗಳು, ಬಾಬರ್ಗಳು ಎಂದು ಮೆರವಣಿಗೆಯುದ್ದಕ್ಕೂ ಹೀಯಾಳಿಸಿ ಘೋಷಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧಿಕಾರಿಗಳು ಮೆರವಣಿಗೆಗೆ ಹಲವಾರು ಶಾಂತಿ ನಿಯಮಗಳನ್ನು ಪಾಲಿಸುವಂತೆ ಆದೇಶ ನೀಡಿದ್ದರೂ ನಿರ್ಲಕ್ಷಿಸಿದ್ದಾರೆ. ಕಾನೂನು ಪಾಲಕರಾದ ಪೊಲೀಸರಿಗೂ ಧಿಕ್ಕಾರ ಕೂಗಿದ್ದಾರೆ ಹಾಗೂ ವೇದಿಕೆಯಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಸುವ್ಯವಸ್ಥೆ ಕಾಪಾಡುವ ಕಾನೂನು ನೀತಿಗೆ ವಿರುದ್ಧವಾಗಿರುತ್ತದೆ. ಶಾಂತಿ ವಾತಾವರಣವಿರುವ ಜಿಲ್ಲೆಯಲ್ಲಿ ಅಶಾಂತಿಯನ್ನು ಉಂಟುಮಾಡುವ ಹುನ್ನಾರವೂ ಆಗಿರುತ್ತದೆ.

ಸಂವಿಧಾನ ಬದ್ಧ, ನ್ಯಾಯಬದ್ಧ ಪ್ರಜಾನೀತಿಗೆ ಅನುಗುಣವಾಗಿ ಜನಸೇವೆ ಮಾಡಲಾಗುವುದೆಂದು ಪ್ರಮಾಣವಚನ ಸ್ವೀಕರಿಸಿದ ಬಿ.ಜೆ.ಪಿ. ಶಾಸಕರು ವೇದಿಕೆಯಲ್ಲಿದ್ದರೂ ಮೌನಸಮ್ಮತಿ ಪ್ರಮಾಣವಚನಕ್ಕೆ ದೊಡ್ಡ ಅಪಮಾನವಾಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಜಿಲ್ಲೆಯಲ್ಲಿ ಶಾಂತಿ ಭಂಗ ಉಂಟುಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸೌಹಾರ್ದ ವಾತಾವರಣಕ್ಕೆ ಧಕ್ಕೆಯಾಗದಂತೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಮೂಲಕ ವಿನಂತಿಸಿದರು.ಈ ವೇಳೆ ಸಿ. ಅಬ್ದುಲ್ ರಹಿಮಾನ್, ರಿಯಾಝ್ ಹರೇಕಳ ಜಿಲ್ಲಾ ಉಪಾಧ್ಯಕ್ಷ ಎಚ್ ಮೊಹಮ್ಮದ್ ಇಸ್ಮಾಯಿಲ್ ಹಿರಿಯ ಮುಖಂಡ ಕೆಸಿ ಖಾದರ್ ಉಪಸ್ಥಿದ್ದರು.






