

ಬೆಳ್ಳಾರೆ : ಪೆರುವಾಜೆ ಗ್ರಾಮದ ಕಾನಾವು ಸಮೀಪದ ಅನವುಗುಂಡಿಯಲ್ಲಿ ಪತ್ನಿ ಹಾಗೂ ಅತ್ತೆಗೆ ಚೂರಿಯಿಂದ ಭೀಕರವಾಗಿ ಇರಿದು ಕಾಡಿನತ್ತ ಪರಾರಿಯಾಗಿದ್ದ ಆರೋಪಿಯನ್ನು ಬೆಳ್ಳಾರೆ ಠಾಣೆ ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅತ್ತೆ ಕುಸುಮ ಹಾಗೂ ಪತ್ನಿ ವಿನುತಾ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅನವುಗುಂಡಿ ನಿವಾಸಿ ಗಣೇಶ ಎಂಬಾತನೇ ಈ ದೌರ್ಜನ್ಯ ಎಸಗಿದ ಆರೋಪಿ.
ಆರೋಪಿ ಗಣೇಶ ಸಾಮಾನ್ಯವಾಗಿ ಪತ್ನಿಯ ಮನೆಯಲ್ಲೇ ವಾಸವಾಗಿದ್ದ. ಸೆಪ್ಟೆಂಬರ್ 6ರಂದು ಭಾನುವಾರ ಮಧ್ಯಾಹ್ನ ಗಣೇಶ ತನ್ನ ಪತ್ನಿ ವಿನುತಾ, ಅತ್ತೆ, ಪುತ್ರ ಹಾಗೂ ಸಂಬಂಧಿಕರೊಂದಿಗೆ ಬೆಳ್ಳಾರೆಯಿಂದ ಆಟೋ ರಿಕ್ಷಾದಲ್ಲಿ ಅನವುಗುಂಡಿಯ ತನ್ನ ಸ್ವಂತ ಮನೆಗೆ ಬಂದಿದ್ದ. ಮನೆಯಲ್ಲಿ ಅರ್ಧ ಗಂಟೆ ಕಳೆದ ಬಳಿಕ ಎಲ್ಲರೂ ಪುನಃ ಪತ್ನಿಯ ಮನೆಗೆ ಹೊರಟಿದ್ದಾರೆ. ಮನೆಯಿಂದ ಹೊರಟು ರಸ್ತೆಗೆ ತಲುಪುತ್ತಿದ್ದಂತೆ ಗಣೇಶ ಏಕಾಏಕಿ ಪತ್ನಿ ವಿನುತಾಗೆ ಚೂರಿಯಿಂದ ಇರಿಯಲು ಮುಂದಾಗಿದ್ದಾನೆ. ಈ ವೇಳೆ ಮಗಳನ್ನು ರಕ್ಷಿಸಲು ಅಡ್ಡಬಂದ ಅತ್ತೆ ಕುಸುಮ ಅವರಿಗೆ ಚೂರಿ ಇರಿದು ಗಂಭೀರ ಗಾಯಗೊಳಿಸಿದ್ದಾನೆ. ಬಳಿಕ ಪತ್ನಿ ವಿನುತಾ ಅವರಿಗೂ ಕ್ರೂರವಾಗಿ ಚೂರಿಯಿಂದ ಇರಿದಿದ್ದಾನೆ. ಘಟನೆಯನ್ನು ಕಂಡು ಗಾಬರಿಗೊಂಡ ಆರೋಪಿಯ ಪುತ್ರ ಹಾಗೂ ಸಂಬಂಧಿಕರು ಸ್ಥಳದಿಂದ ಓಡಿ ತಪ್ಪಿಸಿಕೊಂಡಿದ್ದಾರೆ.

ಕೃತ್ಯ ಎಸಗಿದ ತಕ್ಷಣ ಆರೋಪಿ ಗಣೇಶ ಮನೆ ಸಮೀಪದಲ್ಲಿದ್ದ ದಟ್ಟ ಕಾಡಿನತ್ತ ಓಡಿ ಪರಾರಿಯಾಗಿದ್ದ. ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬೆಳ್ಳಾರೆ ಪೊಲೀಸರು ಕಾಡಿನಲ್ಲಿ ಬಲೆ ಬೀಸಿ, ಸಂಜೆ ವೇಳೆಗೆ ಅಡಗಿ ಕುಳಿತಿದ್ದ ಗಣೇಶನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






