September 12, 2026
WhatsApp Image 2026-09-12 at 10.51.30 AM

ಬಂಟ್ವಾಳ: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಹಿಂದಕ್ಕೆ ಚಲಾಯಿಸುವ ಸಂದರ್ಭ ದಿಮ್ಮಿಯೊಂದು ಜಾರಿ ಬಿದ್ದು, ಲಾರಿ ಕ್ಲೀನರ್ ಮೃತಪಟ್ಟ ಘಟನೆ ಬಂಟ್ವಾಳ ಕಸಬಾ ಗ್ರಾಮದ ಮಣಿ ಸಮೀಪದ ಶ್ರೀ ಮಾರುತಿ ಸಾಮಿಲ್ ನಲ್ಲಿ ನಡೆದಿದೆ.

ಮೃತರನ್ನು ಶಕೀಲ್ ಅಬ್ದುಲ್ ಅಜೀಬ್ (53) ಎಂದು ಗುರುತಿಸಲಾಗಿದೆ.

ಕೇರಳದ ಕಾಲಡಿ ಮರದ ಮಿಲ್ಲಿನಿಂದ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಮಣಿ ಸಮೀಪದ ಶ್ರೀ ಮಾರುತಿ ಸಾಮಿಲ್ ಗೆ ತರಲಾಗಿತ್ತು. ಲಾರಿಯಲ್ಲಿ ಚಾಲಕ ಯಶ ಯರಮಾಳಕರ ಹಾಗೂ ಕ್ಲೀನರ್ ಶಕೀಲ್ ಅಬ್ದುಲ್ ಅಜೀಬ್ ಇದ್ದರು. ಈ ವೇಳೆ ಚಾಲಕ ಲಾರಿಯನ್ನು ಹಿಂದಕ್ಕೆ ಚಲಾಯಿಸುವಾಗ ಹಿಂಬದಿ ಗಮನಿಸದೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಲಾರಿಯಲ್ಲಿದ್ದ ಮರದ ದಿಮ್ಮಿ ಜಾರಿ ಹಿಂಬದಿಯಲ್ಲಿದ್ದ ಕ್ಲೀನರ್ ಶಕೀಲ್ ಅವರ ಮೇಲೆ ಬಿದ್ದಿದೆ ಎನ್ನಲಾಗಿದೆ. ದಿಮ್ಮಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಬಿದ್ದ ಶಕೀಲ್ ಅವರನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಲಾರಿ ಚಾಲಕ ಯಶ ಯರಮಾಳಕರ ಅವರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದ ಚಾಲನೆ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

About The Author

Leave a Reply