Visitors have accessed this post 1080 times.
ಮಂಗಳೂರು: ನಗರದ ಬೋಳಿಯಾರುವಿನಲ್ಲಿ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಏಳು ಮಂದಿಯನ್ನು ಬಂಧಿಸಿದ್ದಾರೆ. ಇಮ್ರಾನ್, ಕೋಲಿ ಇರ್ಷಾದ್, ತಾಜುದ್ದೀನ್ ಸಿದ್ದೀಕ್, ಸರ್ವನ್, ಮುಬಾರಕ್, ಅಶ್ರರಫ್, ತಲ್ಲತ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಆರುಮಂದಿಯನ್ನು ಬಂಧಿಸಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಇದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರೇಂದ್ರ ಮೋದಿಯವರು ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಮಾಡಿರುವ ಹಿನ್ನೆಲೆಯಲ್ಲಿ ರವಿವಾರ ಸಂಜೆ ವಿಜಯೋತ್ಸವ ನಡೆದಿತ್ತು. ಅದರಂತೆ ಅಲ್ಲಿಯೇ ಇದ್ದ ಮಸೀದಿ ಮುಂಭಾಗದಿಂದ ವಿಜಯೋತ್ಸವದ ಮೆರವಣಿಗೆ ಸಾಗಿತ್ತು. ವಿಜಯೋತ್ಸವದ ಬಳಿಕ ಮಸೀದಿಯ ಬಳಿ ಬೈಕ್ ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಈವೇಳೆ ಮಸೀದಿ ಮುಂಭಾಗದಲ್ಲಿದ್ದ ಯುವಕರು ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಅಲ್ಲಿಯೇ ಅನತಿ ದೂರವಿರುವ ಬಾರ್ ಮುಂಭಾಗ ದಾಂಧಲೆ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿದ್ದರು.